ಕಳೆದ ಐದು ವರ್ಷಗಳಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಭೂ ಅಕ್ರಮ ಸೇರಿದಂತೆ ಎಲ್ಲಾ ಸರ್ಕಾರಿ ಯೋಜನೆಗಳು, ಇಲಾಖೆಗಳಲ್ಲಿ ನಡೆದಿರುವ ಅಕ್ರಮಗಳ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪಿ ಸಿದ್ದಾರೆ.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ನಡೆದಿರುವ ಭೂ ಅಕ್ರಮದಲ್ಲಿ ಉಪ ನೊಂದಣಾಧಿಕಾರಿಗಳು, ಏಜೆಂಟರಲ್ಲದೆ ಕೆಲ ತಹಶೀಲ್ದಾರ್ ಸಹ ಭಾಗಿಯಾಗಿದ್ದಾರೆ. ಯಾರ ಹೆಸರಿಗೆ ಈ ಜಮೀನುಗಳು ಅಕ್ರಮ ಖಾತೆಯಾಗಿದೆ ಎಂಬುದು ಪತ್ತೆಯಾದರೆ ಇದರ ಮೂಲ ಯಾರೆಂಬುದು ಬೆಳಕಿಗೆ ಬರುತ್ತದೆ ಎಂದು ಹೇಳಿದರು.
ತಾಲೂಕಿನಲ್ಲಿ ನಡೆದಿರುವ ದೊಡ್ಡ ಭೂ ದಂಧೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಅಕ್ರಮ ನಡೆಸಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದರ ಜೊತೆಗೆ, ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಭೂಮಿಯನ್ನು ವಾಪಸ್ ಕೊಡಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಪಟ್ಟಣಕ್ಕೆ 24 ಗಂಟೆ ಕುಡಿಯುವ ನೀರು ಪೂರೈಕೆ ಮಾಡುವ 79 ಕೋಟಿ ವೆಚ್ಚದ ಯೋಜನೆಯ ಕಾಮಗಾರಿ ಪೂರ್ಣ ಗೊಳ್ಳದಿದ್ದರೂ ಪುರಸಭೆಗೆ ಹಸ್ತಾಂತರ ಮಾಡಿದ್ದು, ಇದರಲ್ಲಿಯೂ ಭಾರಿ ಅಕ್ರಮ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಹ ಅಕ್ರಮಗಳು ನಡೆದಿದ್ದು,ಈ ಎಲ್ಲದರ ಬಗ್ಗೆ ತನಿಖೆ ನಡೆಸಲಾಗುವುದು. ಅಲ್ಲದೆ ನೆನೆಗುದಿಗೆ ಬಿದ್ದಿರುವ ಪೂರಿಗಾಲಿ ಏತ ನೀರಾವರಿ ಯೋಜನೆ ಸೇರಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.