ರಾಜ್ಯದಲ್ಲಿ 40% ಕಮಿಷನ್ ನಡೆಯುತ್ತಿದ್ದರೆ, ನಾಗಮಂಗಲದಲ್ಲಿ ಶಾಸಕ ಸುರೇಶ್ ಗೌಡ ಇನ್ನೂ 8% (ಪರ್ಸೆಂಟ್) ಹೆಚ್ಚಿಗೆ ಸೇರಿಸಿ 48% ಕಮಿಷನ್ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದರು.
ಮದ್ದೂರು ತಾಲೂಕಿನ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿಯಲ್ಲಿ ಸೋಮವಾರ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಎಂಎಲ್ಎ ಸುರೇಶ್ ಗೌಡರು ಬೆಂಗಳೂರಿನ ಸಭೆಯೊಂದರಲ್ಲಿ ದುಡ್ಡು ಕೊಟ್ಟು ಕೆಲಸ ತರಬೇಕು ಎಂದು ಹೇಳಿಕೆ ನೀಡಿದ್ದರು. ಪಕ್ಷೇತರ ಶಾಸಕನಾಗಿರಲಿ, ಜೆಡಿಎಸ್ ಶಾಸಕನಾಗಿರಲಿ ದುಡ್ಡು ಕೊಟ್ಟು ಕೆಲಸ ತರಬೇಕು ಎನ್ನುವ ಶಾಸಕ ನಾಗಮಂಗಲಕ್ಕೆ ಬೇಕಾ ಎಂದು ಪ್ರಶ್ನಿಸಿದರು.
ದುಡ್ಡು ಕೊಟ್ಟು ಕೆಲಸ ತರುತ್ತೇನೆ ಎನ್ನುವ ಎಂಎಲ್ಎ ರಾಜ್ಯದಲ್ಲೇ ಎಲ್ಲೂ ಇಲ್ಲ. ಹಣ ಕೊಟ್ಟು ಕೆಲಸ ತರತ್ತೇನೆ ಎಂದರೆ ನನಗೆ ಕಮಿಷನ್ ಹೆಚ್ಚು ಕೊಡಲಿ ಎಂಬುದು ಸುರೇಶ್ ಗೌಡರ ಹುನ್ನಾರ. ಇಡೀ ರಾಜ್ಯದಲ್ಲಿ 40% ಹಣ ಕೊಡಬೇಕಿದ್ದರೆ ನಾಗಮಂಗಲದಲ್ಲಿ ಇನ್ನು 8% ಹೆಚ್ಚಿಗೆ ಸೇರಿಸಿ ಒಟ್ಟು 48% (ಪರ್ಸೆಂಟ್) ಕೊಡಬೇಕಾಗಿದೆ. ಶಾಸಕ ಸುರೇಶ್ ಗೌಡರು 8 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿಲ್ಲ ಎಂದರೆ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.