ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಗ್ರಾಮದೇವತೆ ದೊಡ್ಡಮ್ಮತಾಯಿ ಹಬ್ಬ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ತಂಬಿಟ್ಟು ಅರತಿ, ಮಡೆ ಹೊತ್ತ ಮಹಿಳೆಯರು ಮಡಿ ಮೇಲೆ ಗ್ರಾಮದ ಮುದ್ದಮ್ಮ, ಮಾರಮ್ಮ ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿ ಬಳಿಕ ಶ್ರೀದೊಡ್ಡಮ್ನತಾಯಿ ದೇವಾಲಯದ ಬಳಿ ಜಮಾವಣೆಗೊಂಡು ಸಾಮೂಹಿಕ ಪೂಜೆ ಸಲ್ಲಿಸಿ ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.
ದೊಡ್ಡಮ್ಮತಾಯಿ ದೇವಾಲಯದಲ್ಲಿ ಜಮಾವಣೆಗೊಂಡ ಹೆಣ್ಣು ಮಕ್ಕಳು ಮಡಿ ಬಟ್ಟೆಯ ಮೇಲೆ ಅರತಿ ಇಟ್ಟು ಪೂಜಿಸಿದ ಬಳಿಕ, ಪುರುಷರು ಕುರಿ, ಕೋಳಿ ಬಲಿ ನೀಡಿ ಗ್ರಾಮದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷರಾದ ಅಭಿನಂದನ್ ಮಾತನಾಡಿ, ಪ್ರತಿ ವರ್ಷ ಯುಗಾದಿ ಮುನ್ನಾ ದಿನ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಒಳಿತಿಗಾಗಿ ಪ್ರಾರ್ಥಿಸಲಾಗುತ್ತದೆ ಎಂದರು.
ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಚ್ಚಿದಾನಂದ, ಕುಮಾರ್, ನಿರ್ದೇಶಕ ನಂದೀಶ್ ಮುಖಂಡರಾದ ಜಟ್ಟಿ ಕುಮಾರ್, ಪೂಜಾರಿ ಶಂಕರ್ ಸೇರಿದಂತೆ ಗ್ರಾಮದ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.