✍️ಮಾಚಯ್ಯ ಹಿಪ್ಪರಗಿ
ದ್ವಾಪರದ ಭಾರತ
ಮುಗಿದುಹೋಯಿತು
ಅಂದವರ್ಯಾರು?
ಮತ್ತೆಮತ್ತೆ
ಮರುಕಳಿಸುತ್ತಲೇ ಇದೆ,
ದುಶ್ಯಾಸನರ ಅಟ್ಟಹಾಸದಲ್ಲಿ;
ನಲುಗುತ್ತಿರುವ
ದ್ರೌಪದಿಯರ ಸೀರೆಯ
ಸೆರಗುಗಳಲ್ಲಿ!
ರಾಜಸಭೆಯಲ್ಲಿ
ಹರಾಜುಗೊಂಡ
ಪಾಂಚಾಲಿಯ ಮಾನ,
ಇಂದು ನಡುಬೀದಿಯ ನಡುವೆ
ಬಿಕರಿಗೊಳ್ಳುತ್ತಿದೆ
ಬೆತ್ತಲೆಯ ಮೆರವಣಿಗೆಯಲ್ಲಿ;
ವಿಜಯೋತ್ಸವದ
ವಿಕಾರ ರೂಪದಲ್ಲಿ!
ಗಾಂಧಾರಿಯ ತೊರೆದ
ಧೃತರಾಷ್ಟ್ರನೀಗ
ಕಣ್ಣಿಲ್ಲದ
ಕುರುಡನಷ್ಟೇ ಅಲ್ಲ,
ಮಾತು ಕಳೆದುಕೊಂಡ
ಮೂಗನೂ ಹೌದು
ಮತಿ ಕಳೆದುಕೊಂಡ
ಮೂಢನೂ ಹೌದು;
ಶಕುನಿಗಳು ನೂರ್ಮಡಿಸಿರುವ
ಪಗಡೆಯಾಟದಲ್ಲಿ
ಮತ್ತೆಮತ್ತೆ
ಬೆತ್ತಲಾಗುತ್ತಲೇ ಇದ್ದಾರೆ
ದ್ರೌಪದಿಯರು,
ಸೀತೆಯಂತೆ
ಜ್ವಾಲೆಗಳ ನಡುವೆ
ಬೆಂದುಹೋಗುವ
ಭಾಗ್ಯವೂ ತಮಗಿಲ್ಲವಾಯಿತೆಂಬ
ಕೊರಗಿನಲ್ಲಿ!
ಪೂತನಿಯ
ಸ್ತನ ಕಚ್ಚಿ
ಕೊಂದ ಕೃಷ್ಣ,
ಇಂದು ಅದ್ಯಾಕೋ
ದ್ರೌಪದಿಯರ
ಮಾನ ಕಾಯಲು
ಎಣಿಸುತ್ತಿದ್ದಾನೆ
ಮೀನಾಮೇಷ,
‘ಯದಾ ಯದಾಹೀ
ಧರ್ಮಸ್ಯ’
ಎಂದರೇನೆಂಬ
ಗೊಂದಲದಲ್ಲಿ!
ಕೀಚಕನು ಒಬ್ಬನಲ್ಲ,
ಸಂಖ್ಯೆಯಲಿ ಇಂದು
ಅವರಿಗೆ ಮಿತಿಯಿಲ್ಲ,
ಎಲ್ಲೆಂದರಲ್ಲಿ,
ಹೇಗೆಂದರ್ಹಾಗೆ
ನರಳುತ್ತಿರುವ
ದ್ರೌಪದಿಯರ ಹಿತಕಾಯುವ
ಭೀಮಸೇನನೂ
ಅದ್ಯಾಕೋ ಕಾಣುತ್ತಿಲ್ಲ!
ದ್ವಾಪರದ ಭಾರತ
ಮುಗಿದುಹೋಯಿತು
ಅಂದವರ್ಯಾರು?
ಮತ್ತೆಮತ್ತೆ
ಮರುಕಳಿಸುತ್ತಲೇ ಇದೆ,
ಬೆತ್ತಲಾಗುತ್ತಿರುವ
ದ್ರೌಪದಿಯರ
ನಿಟ್ಟುಸಿರುಗಳಲ್ಲಿ!