ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಸೆ.14ರಿಂದ 16ರವರೆಗೆ 3 ದಿನಗಳ ಕಾಲ ಭಾರತ ಉತ್ಸವ 2023 ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ. ಪಿ ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ರಾಜಕಾರಣಿ, ಸಹಕಾರಿ ದುರೀಣ, ಶೈಕ್ಷಣಿಕ ರೂವಾರಿ ಜಿ.ಮಾದೇಗೌಡರ ದೂರದೃಷ್ಠಿಯಿಂದ ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀ ಏಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಕಳೆದ 13 ವರ್ಷಗಳಿಂದ ಭಾರತೀ ಉತ್ಸವ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ಸೆ.14ರಂದು ಬೆಳಿಗ್ಗೆ ರಂಗೋಲಿ ಸ್ಪರ್ಧೆ, ವಿದ್ಯಾರ್ಥಿಗಳ ಮೆರವಣಿಗೆ, ನಂತರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಟ ದೊಡ್ಡಣ್ಣ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ಸಾಹಿತಿ ಹಾಗೂ ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ರೂಪದರ್ಶಿ ರಚನಾ ಇಂದರ್ ಭಾಗವಹಿಸಲಿದ್ದು, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥತರಿರುದ್ದಾರೆಂದು ತಿಳಿಸಿದರು.
ಮೈಸೂರು ವಿಭಾಗದ ಮಟ್ಟದ ಹಲವು ಕಾಲೇಜುಗಳ ಒಂದು ಸಾವಿರ ವಿದ್ಯಾರ್ಥಿಗಳು ಭಾರತೀ ಉತ್ಸವದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು, ಪ್ರತಿ ವಿಭಾಗಕ್ಕೆ 15 ತಂಡಗಳು ಆಗಮಿಸುವ ನಿರೀಕ್ಷೆ ಇದ್ದು, ಪ್ರತಿ ವಿಭಾಗದ ವಿಜೇತರಿಗೆ ಪ್ರಥಮ ₹10 ಸಾವಿರ, ದ್ವಿತೀಯ ₹8 ಸಾವಿರ ಹಾಗೂ ತೃತೀಯ ₹6 ಸಾವಿರ ಬಹುಮಾನ ನೀಡಲಾಗುವುದೆಂದು ತಿಳಿಸಿದರು.
ಭಾರತೀ ಉತ್ಸವದಲ್ಲಿ ಅಂತರ ಕಾಲೇಜು ಸಮೂಹ ನೃತ್ಯ, ಸಮೂಹ ಜಾನಪದ ಗೀತೆ, ಜೋಡಿ ನೃತ್ಯ, ಏಕ ವ್ಯಕ್ತಿ ನೃತ್ಯ ಪ್ರದರ್ಶನ, ಹಾಸ್ಯಸಂಜೆ, ಕಿರುತೆರೆ ಖ್ಯಾತಿಯ ಕಾಮಿಡಿ ಕಿಲಾಡಿಗಳು, ರಾಮಾಚಾರಿ ಹಾಗೂ ಸೀತಾರಾಮ ಧಾರಾವಾಹಿ ತಂಡದವರು ಭಾಗವಹಿಸಿ, ಕಾರ್ಯಕ್ರಮ ನೀಡಲಿದ್ದಾರೆಂದು ತಿಳಿಸಿದರು.
ಗೋಷ್ಠಿಯಲ್ಲಿ ಉತ್ಸವ ಸಮಿತಿಯ ಸಂಚಾಲಕರಾದ ಮಹದೇವಸ್ವಾಮಿ, ಎಸ್.ರೇವಣ್ಣ ಉಪಸ್ಥಿತರಿದ್ದರು.