ಕೆ.ಆರ್.ಎಸ್ ಅಣೆಕಟ್ಟೆಗೆ ಬಾಗಿನ ಸಮರ್ಪಣೆ ಸಮಾರಂಭಕ್ಕೆ ರಾಜ್ಯಸರ್ಕಾರ ಮೈಸೂರು ರಾಜವಂಶಸ್ಥರನ್ನು ತಪ್ಪದೇ ಆಹ್ವಾನ ನೀಡಬೇಕು ಎಂದು ರೈತ ಸಂಘ(ರೈತ ಬಣ)ದ ಸಂಸ್ಥಾಪಕ ಇ.ಎನ್.ಕೃಷ್ಣೇಗೌಡ ಇಂಗಲಗುಪ್ಪೆ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿ ಬಾಗಿನ ಅರ್ಪಣೆ ಮಾಡುವುದು ವಾಡಿಕೆ. ಆದರೆ ಜಲಾಶಯದ ನಿರ್ಮಾತೃ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ಸಲ್ಲಿಸಲು ಮೈಸೂರು ರಾಜವಂಶಸ್ಥರನ್ನು ಆಹ್ವಾನಿಸಬೇಕು. ಇದನ್ನು ಸದನದಲ್ಲಿ ನಿರ್ಣಯ ಮಾಡುವುದರ ಜತೆಗೆ ಬಾಗಿನ ಸಲ್ಲಿಕೆ ವೇಳೆ ತಪ್ಪದೇ ಪಾಲನೆ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಣೆಕಟ್ಟೆ ನಿರ್ಮಾಣ ಮಾಡಲು ನಾಲ್ವಡಿ ಅವರು ತಮ್ಮ ಕುಟುಂಬದ ಆಸ್ಥಿ, ಚಿನ್ನಾಭರಣ ಮಾರಾಟ ಮಾಡಿದ್ದಾರೆ. ಈ ಅಣೆಕಟ್ಟೆಯಿಂದ ಲಕಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಕೋಟ್ಯಂತರ ಜನರಿಗೆ ಕುಡಿಯುವ ನೀರಿಗೆ ದಾರಿಯಾಗಿದೆ. ಆದ್ದರಿಂದ ಬಾಗಿನ ಸಲ್ಲಿಕೆಗೆ ಆಹ್ವಾನಿಸಿ ಗೌರವಿಸಬೇಕು ಎಂದು ಮನವಿ ಮಾಡಿದರು.
ಸಂಘದ ಹೆಮ್ಮಿಗೆ ಚಂದ್ರಶೇಖರ್, ಕೆಂಪರಾಜು, ಸಂಜಯ್, ರಮೇಶ ಇದ್ದರು.