ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಡ್ಯದ ಡಿಆರ್ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಸೆ.27ರಂದು ಉಚಿತವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೋಪಾಲಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಂಘಟಿಸಿರುವ ಈ ಶಿಬಿರವು ಅಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆಯಲಿದೆ. ಗ್ರಾಮೀಣ ಪ್ರದೇಶಗಳ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮತ್ತು ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಶಿಬಿರ ಸಂಘಟಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಎಂ.ಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರದಲ್ಲಿ ಜನರ ಆರೋಗ್ಯ ತಪಾಸಣೆ ಮಾಡುವ ಜತೆಗೆ ಉಚಿತವಾಗಿ ಬಿಪಿ(ರಕ್ತದೊತ್ತಡ), ಶುಗರ್(ಸಕ್ಕರೆ ಕಾಯಿಲೆ) ಪರೀಕ್ಷೆ ಹಾಗೂ ರಕ್ತದ ಗುಂಪು ಪರೀಕ್ಷೆ ಮಾಡಲಾಗುವುದು. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಕಾಯಿಲೆ ಇರುವವರು ಉಚಿತವಾಗಿ ಎಕೋ, ಅವಶ್ಯಕತೆ ಇರುವವರಿಗೆ ಇಸಿಜಿ ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ.
ಅಂದು ಬೆಳಗ್ಗೆ 9.30ಕ್ಕೆ ಶಾಸಕ ಪಿ.ರವಿಕುಮಾರ್ ಶಿಬಿರಕ್ಕೆ ಚಾಲನೆ ನೀಡುವರು. ಗ್ರಾ.ಪಂ. ಅಧ್ಯಕ್ಷೆ ಸವಿತಾ ಅಧ್ಯಕ್ಷತೆ ವಹಿಸುವರು. ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸಿಫ್, ಡಿಎಚ್ಒ ಡಾ.ಕೆ.ಮೋಹನ್, ಮೂಳೆ ರೋಗಗಳ ತಜ್ಞರಾದ ಡಾ.ಕಿರಣ್ಕುಮಾರ್, ಡಾ.ಚಂದನ್, ಹೃದ್ರೋಗ ತಜ್ಞ ಡಾ.ರಮೇಶ್, ಮಕ್ಕಳ ತಜ್ಞ ಡಾ.ಶರತ್ ಕೀರ್ತಿ, ಮೂತ್ರಪಿಂಡ ತಜ್ಞ ಡಾ.ವಿಜಯ್, ಗೋಪಾಲಪುರ ಗ್ರಾ.ಪಂ. ಉಪಾಧ್ಯಕ್ಷ ಕೆ.ಆರ್.ಕೆಂಪಾಚಾರಿ, ಪಿಡಿಒ ಎಂ.ಕೆ.ಅನಿತಾ ರಾಜೇಶ್ವರಿ ಮತ್ತು ಸದಸ್ಯರು ಭಾಗವಹಿಸುವರು.