ಕದನ ವಿರಾಮ ಕೊನೆಗೊಂಡ ಬೆನ್ನಲ್ಲೇ ಇಸ್ರೇಲ್ ಗಾಝಾ ಮೇಲೆ ಮತ್ತೆ ದಾಳಿ ಪ್ರಾರಂಭಿಸಿತ್ತು. ಕಳೆದ ಶುಕ್ರವಾರದ ಬಳಿಕ ಗಾಝಾದಲ್ಲಿ 700ಕ್ಕೂ ಅಧಿಕ ಪ್ಯಾಲೆಸ್ತೀನ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಗಾಝಾ ಮೇಲಿನ ಹೊಸ ದಾಳಿಯನ್ನು ಖಂಡಿಸಿ ಟೆಲ್ ಅವಿವ್ನಲ್ಲಿ ಇಸ್ರೇಲ್ ಮಿಲಿಟರಿಯ ಪ್ರಧಾನ ಕಛೇರಿಯ ಹೊರಗೆ ಶನಿವಾರ ರಾತ್ರಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ.
ಗಾಝಾ ಮೇಲಿನ ದಾಳಿಯು ಹಮಾಸ್ ಇರಿಸಿಕೊಂಡಿರುವ 130 ಒತ್ತೆಯಾಳುಗಳ ಬಿಡುಗಡೆ ತಡೆಗೆ ಕಾರಣವಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಹಮಾಸ್ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಇಸ್ರೇಲ್ ರಕ್ಷಣಾ ಪಡೆಯ ಕಿರಿಯ ಮಿಲಿಟರಿ ನೆಲೆಯ ಸುತ್ತಲೂ ರ್ಯಾಲಿಯನ್ನು ನಡೆಸಲಾಗಿದೆ. ತುರ್ತು ಕ್ಯಾಬಿನೆಟ್ ಸಭೆ ಕರೆದು ಯುದ್ಧ ವಿರಾಮಕ್ಕೆ ಆಗ್ರಹಿಸಲಾಗಿದೆ.
ಪ್ರತಿಭಟನೆಯ ಭಾಗವಾಗಿದ್ದ ಹಾಸ್ಯನಟ ನೋಮ್ ಶುಸ್ಟರ್ ಎಲಿಯಾಸ್ಸಿ ಮಾತನಾಡಿ, ಶುಕ್ರವಾರ ಆರಂಭಿಸಿದ ಯುದ್ಧ ಪುನರಾರಂಭಿಸುವ ನಿರ್ಧಾರವು ಒತ್ತೆಯಾಳುಗಳ ಕುಟುಂಬಸ್ಥರನ್ನು ಮತ್ತಷ್ಟು ದುಃಖಕ್ಕೆ ತಳ್ಳುವಂತಿದೆ. ಅವರ ತಂತ್ರ ಏನು? ಗಾಝಾದ ಮೇಲೆ ನಿರಂತವಾಗಿ ಬಾಂಬ್ ದಾಳಿಯನ್ನು ನಡೆಸುವುದ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿರುವವರಲ್ಲಿ ಅನೇಕರು ಯುದ್ಧ ವಿರೋಧಿಗಳು, ಈ ಕ್ರಿಮಿನಲ್ ಸರ್ಕಾರವನ್ನು ತಡೆಯಲು ನಾವು ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತಿದ್ದೇವೆ. ರಾಜಕೀಯ ಪ್ರಯತ್ನಗಳು ಮತ್ತು ರಾಜತಾಂತ್ರಿಕ ಒಪ್ಪಂದಗಳು ಮಾತ್ರ ಜನರನ್ನು ಜೀವಂತವಾಗಿರಿಸಬಹುದು ಎಂದು ಶಸ್ಟರ್-ಎಲಿಯಾಸ್ಸಿ ಹೇಳಿದ್ದಾರೆ.
ಅಪಹರಣಕ್ಕೊಳಗಾದ ಕೆಲ ಒತ್ತೆಯಾಳುಗಳ ಕುಟುಂಬಸ್ಥರು ಇದೇ ಮೊದಲ ಬಾರಿಗೆ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಯೆಲ್ ಅಡಾರ್ ಎಂಬವರು ಭಾಗವಹಿಸಿದ್ದರು. ಅವರ ಮಗ ತಮೀರ್ ಈಗಲೂ ಹಮಾಸ್ ವಶದಲ್ಲಿದ್ದಾರೆ. 85 ವರ್ಷದ ಅತ್ತೆ ಯಾಫಾ ಅವರನ್ನು ಒಂದು ವಾರದ ಹಿಂದೆ ಹಮಾಸ್ ಬಿಡುಗಡೆ ಮಾಡಿತ್ತು.
ಪ್ರತಿಭಟನೆಯ ವೇಳೆ ಟೆಲ್ ಅವಿವ್ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಗಾಝಾದಿಂದ ರಾಕೆಟ್ ದಾಳಿ ನಡೆಯುತ್ತದೆ ಎಂದು ಇಸ್ರೇಲ್ ಸೇನೆ ಸೈರನ್ನಲ್ಲಿ ಎಚ್ಚರಿಕೆ ನೀಡಿದ್ದು, ಈ ವೇಳೆ ಪ್ರತಿಭಟನೆಯನ್ನು ಕೈಬಿಡಲಾಗಿದೆ.
ಬೆಂಜಮಿನ್ ನೆತನ್ಯಾಹು ಅವರ ಎಸ್ಟೇಟ್ ಇರುವ ಸಿಸೇರಿಯಾದಲ್ಲಿ ಮತ್ತೊಂದು ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಯಿತು. ನೋವಾ ಸಂಗೀತೋತ್ಸವದಲ್ಲಿ ಹತ್ಯೆಗೀಡಾದ ಒರಿಯಾಳ ತಂದೆ ಎರಾನ್ ಲಿಟ್ಮ್ಯಾನ್, ನೆತನ್ಯಾಹುಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಇಸ್ರೇಲ್ನಲ್ಲಿ 1,200 ಜನರ ಸಾವಿಗೆ ಕಾರಣವಾದ ಅ.7ರ ಹಮಾಸ್ ದಾಳಿಗೆ ಇಸ್ರೇಲ್ ಮಿಲಿಟರಿಯನ್ನು ಲಿಟ್ಮ್ಯಾನ್ ಟೀಕಿಸಿದ್ದಾರೆ. ಇಸ್ರೇಲ್ ಸರ್ಕಾರ ಮತ್ತು ನೆತನ್ಯಾಹು ಕೈಗಳು ರಕ್ತದಿಂದ ಆವೃತವಾಗಿವೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ಟೆಲ್ ಅವಿವ್ನ ಮ್ಯೂಸಿಯಂ ಆಫ್ ಆರ್ಟ್ನ ಹೊರಗೆ ಸಾವಿರಾರು ಜನರು ಭಾಗವಹಿಸಿ ಪ್ರತಿಭಟನೆಯನ್ನು ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಯುದ್ಧದ ಪುನರಾರಂಭವು ಮತ್ತಷ್ಟು ಒತ್ತೆಯಾಳುಗಳ ಬಿಡುಗಡೆಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. 7 ದಿನಗಳ ಕದನವಿರಾಮವು ಇಸ್ರೇಲ್ನ ಮಹಿಳೆಯರು ಮತ್ತು ಮಕ್ಕಳು ಸೇರಿ 81 ಮಂದಿಯನ್ನು ಮತ್ತು 24 ವಿದೇಶಿ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಲು ಸಾಧ್ಯವಾಗಿದೆ.
ಕಾಲ್ಡೆರಾನ್ ಎಂಬವರ ಎರಡು ಮಕ್ಕಳನ್ನು ಇತ್ತೀಚೆಗೆ ಹಮಾಸ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ಮಾತನಾಡಿದ ಕಾಲ್ಡೆರಾನ್, ಒಂದು ಪವಾಡ ಸಂಭವಿಸಿದೆ ಮತ್ತು ಎಲ್ಲರಿಗೂ ಪವಾಡ ಸಂಭವಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಒತ್ತೆಯಾಳುಗಳು ಬಿಡುಗಡೆಗೊಳ್ಳುವವರೆಗೂ ಪೋಷಕರು ಜೀವಂತವಾಗಿರುತ್ತಾರೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಕದನ ವಿರಾಮದ ಬಳಿಕ ಇಸ್ರೇಲ್ ಯುದ್ಧ ಮರು ಪ್ರಾರಂಭಿಸಿದ್ದರಿಂದ ಇಸ್ರೇಲ್ನಲ್ಲಿ ಆಂತರಿಕವಾಗಿ ಪ್ರತಿಭಟನೆ ಭುಗಿಲೆದ್ದಿದೆ. ಇಸ್ರೇಲ್ ಕ್ಯಾಬಿನೆಟ್ ಸಭೆ ನಡೆಸಿ ತುರ್ತು ಕದನ ವಿರಾಮಕ್ಕೆ ಆಗ್ರಹಿಸಲಾಗಿದೆ.