ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮೈಸೂರಿಗೆ ಆಗಮಿಸಿದ್ದು, ಪ್ರಕರಣದ ಆರೋಪಿ ಮೈಸೂರು ನಿವಾಸಿ ಮನೋರಂಜನ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೋರಂಜನ್ ತಂದೆ ಮತ್ತು ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ಮನೋರಂಜನ್ ಮನೆಗೆ ದೆಹಲಿ ಪೊಲೀಸರ ತಂಡ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಪೊಲೀಸರ ತಂಡದಲ್ಲಿ ಮಹಿಳಾ ಪೊಲೀಸರು ಕೂಡ ಇದ್ದರು. ಮನೋರಂಜನ್ ಕೊಠಡಿಯಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಪುಸ್ತಕ ಸೇರಿದಂತೆ ಮನೋರಂಜನ್ ಬಳಸುತ್ತಿದ್ದ ವಸ್ತುಗಳನ್ನು ಪರಿಶೀಲಿಸಿದ್ದಾರೆ.
ಡಿ.13ರಂದು ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಹರಡಿದ್ದರು. 2001ರ ಸಂಸತ್ ದಾಳಿಯ 22ನೇ ವಾರ್ಷಿಕದ ದಿನದಂದೇ ಈ ಭದ್ರತಾ ಲೋಪ ಸಂಭವಿಸಿದೆ.
ಹೊಗೆ ಡಬ್ಬಿಗಳನ್ನು ಹಿಡಿದುಕೊಂಡು ಸಂಸತ್ತಿನ ಕಟ್ಟಡದ ಹೊರಗೆ ಸರ್ವಾಧಿಕಾರ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿದ ನೀಲಂ ಆಜಾದ್, ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡಲು ಪ್ರಯತ್ನಿಸಿದಾಗಲೆಲ್ಲಾ ಲಾಠಿ ಚಾರ್ಜ್ ಮಾಡಿ ಬಂಧಿಸಲಾಗುತ್ತದೆ. ನಮಗೆ ಬೇರೆ ದಾರಿ ಇರಲಿಲ್ಲ. ನಾವು ಯಾವುದೇ ಸಂಘಟನೆಯಿಂದ ಬಂದವರಲ್ಲ, ನಾವು ಸಾಮಾನ್ಯ ಜನರು, ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು. ನಮ್ಮ ಪೋಷಕರು ಕಷ್ಟಪಟ್ಟು ದುಡಿಯುವ ಕಾರ್ಮಿಕರು, ರೈತರು. ನಮ್ಮ ಧ್ವನಿಯನ್ನು ಹತ್ತಿಕ್ಕಲಾಗಿದೆ ಎಂದು ಹೇಳಿದ್ದರು.
ಘಟನೆಗೆ ಸಂಬಂಧಿಸಿ ಲೋಕಸಭೆಯೊಳಗೆ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್, ಸಂಸತ್ತಿನ ಹೊರಗೆ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಲಲಿತ್ ಝಾನನ್ನು ಬಂಧಿಸಲಾಗಿತ್ತು. ಇದಲ್ಲದೆ ಲಲಿತ್ ಝಾಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮಹೇಶ್ ಕುಮ್ವತ್ ಮತ್ತು ಕೈಲಾಶ್ ಅವರ ವಿಚಾರಣೆ ಕೂಡ ನಡೆಯುತ್ತಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವೇಳೆ ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಸದನದೊಳಗೆ ಪ್ರವೇಶಿಸಲು ಸಂದರ್ಶಕರ ಪಾಸ್ಗಳನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದರು ಎನ್ನುವುದು ಬಯಲಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ಕೂಡ ತನಿಖಾಧಿಕಾರಿಗಳು ದಾಖಲಿಸಿಕೊಳ್ಳಲಿದ್ದಾರೆ.
ಸಂಸತ್ತಿನಲ್ಲಿ ಭದ್ರತಾಲೋಪ ಪ್ರಕರಣದ ಕುರಿತು ಗೃಹ ಸಚಿವರಾದ ಅಮಿತ್ ಶಾ ಅವರು ಹೇಳಿಕೆಯನ್ನು ನೀಡಬೇಕೆಂದು ಒತ್ತಾಯಿಸಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನಿನ್ನೆ ಸಂಸದರು ಪಟ್ಟು ಹಿಡಿದಿದ್ದರು. ಈ ವೇಳೆ ಉಭಯ ಸದನಗಳ 92ಕ್ಕೂ ಹೆಚ್ಚು ಸಂಸದರನ್ನು ಅಮಾನತು ಮಾಡಲಾಗಿದೆ.