ಭಾರತೀಯ ರಕ್ಷಣಾ ಪಡೆಗಳ ಮಾಜಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 12 ಮಂದಿಯ ಸಾವಿಗೆ ಕಾರಣವಾದ ತಮಿಳುನಾಡಿನ ಕುನ್ನೂರ್ ಬಳಿ ನಡೆದ ಹೆಲಿಕಾಪ್ಟರ್ ದುರಂತದ ಬಗ್ಗೆ ನಡೆಸುತ್ತಿದ್ದ ತನಿಖೆಯನ್ನು ತಮಿಳುನಾಡು ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಡಿ.8, 2021ರಂದು ತಮಿಳುನಾಡಿನ ಕುನ್ನೂರ್ ಬಳಿ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಬಗ್ಗೆ ಹೆಚ್ಚಿನ ತನಿಖೆಯನ್ನು ತಮಿಳುನಾಡು ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಈ ಕುರಿತು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ)ಯ ಸೆಕ್ಷನ್ 174ರಡಿಯಲ್ಲಿ ಕುನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರಿಗೆ ಪತನಗೊಂಡ ಹೆಲಿಕಾಫ್ಟರ್ನ ಫ್ಲೈಟ್ ಡೇಟಾ ರೆಕಾರ್ಡರ್, ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಹಾಗೂ ಹವಾಮಾನ ಕ್ಲಿಯರೆನ್ಸ್ ವರದಿ ಕುರಿತ ಪ್ರಮುಖ ಪುರಾವೆಗಳ ಕುರಿತು ಮಾಹಿತಿಯ ಕೊರತೆಯಿಂದಾಗಿ ಅವರು ತನಿಖೆ ಬಾಕಿಯಿರಿಸಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ವಾಯುಪಡೆಯ ಅಧಿಕಾರಿಗಳು ಈ ಯಾವುದೇ ವಿವರಗಳನ್ನು ತನಿಖಾಧಿಕಾರಿಗಳೊಂದಿಗೆ ಹಂಚಿಕೊಂಡಿಲ್ಲ. ಅಗತ್ಯವಿರುವ ಮಾಹಿತಿಯು ರಕ್ಷಣಾ ಇಲಾಖೆಯ ರಹಸ್ಯ ಮಾಹಿತಿಯಡಿ ಬರುತ್ತದೆ ಎಂದು ಏರೋಸ್ಪೇಸ್ ಸುರಕ್ಷತಾ ನಿರ್ದೇಶನಾಲಯದಿಂದ ಮಾಹಿತಿಯನ್ನು ಕೋರುವಂತೆ ಅವರು ಪೊಲೀಸರಿಗೆ ಸೂಚಿಸಿದ್ದರು.
ಡಿ.8, 2021ರಂದು ಕೊಯಂಬತ್ತೂರಿನ ಸೂಲೂರು ವಾಯು ನೆಲೆಯಿಂದ ನೀಲಗಿರಿಯ ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನತ್ತ ತೆರಳುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಕೆಲವೇ ನಿಮಿಷಗಳ ಮೊದಲು ಪತನಗೊಂಡಿತ್ತು.
ಹವಾಮಾನದಲ್ಲುಂಟಾದ ಅನಿರೀಕ್ಷಿತ ಬದಲಾವಣೆಯಿಂದಾಗಿ ಈ ಪತನ ಸಂಭವಿಸಿದೆ ಎಂದು ಟ್ರೈ-ಸರ್ವಿಸ್ ತನಿಖೆಯ ವರದಿ ತಿಳಿಸಿತ್ತು. ಈ ವರದಿಯನ್ನು ಜನವರಿ 14, 2022ರಂದು ಸಲ್ಲಿಸಲಾಗಿತ್ತು. ಇದೊಂದು ವಿಧ್ವಂಸಕ ಕೃತ್ಯವಲ್ಲ, ನಿರ್ಲಕ್ಷ್ಯದಿಂದ ಅಥವಾ ತಾಂತ್ರಿಕ ವೈಫಲ್ಯದಿಂದ ಉಂಟಾಗಿಲ್ಲ ಎಂದು ಕೋರ್ಟ್ ಆಫ್ ಇಂಕ್ವೈರಿ ಕಂಡುಕೊಂಡಿದೆ ಎಂದು ವಾಯುಪಡೆ ಹೇಳಿತ್ತು.
ಜನರಲ್ ಬಿಪಿನ್ ರಾವತ್ ಅವರು ರಕ್ಷಣಾ ಪಡೆಯ(CDS) ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಸೇನಾಧಿಕಾರಿ. ಜನರಲ್ ರಾವತ್ ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಸೇರಿದಂತೆ ಹಲವಾರು ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ನಾಲ್ಕು ದಶಕಗಳ ಕಾಲ ಕೆಲಸವನ್ನು ಮಾಡಿದ್ದರು.