ಮಂಡ್ಯ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ, ಮಾಹಿತಿ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮಂಡ್ಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಮೀಣ ಐಟಿ ರಸಪ್ರಶ್ನೆ 2023ರ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಚಂದ್ರಕಾಂತ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸುಮಾರು ವರ್ಷಗಳ ಹಿಂದೆ ಉಮ್ಮಡಹಳ್ಳಿ ಗ್ರಾಮದಲ್ಲಿ ಮುಖ್ಯೋಪಾಧ್ಯಾಯನಿಯಾಗಿದ್ದ ಸಮಯದಲ್ಲಿ ಅವರ ವಿದ್ಯಾರ್ಥಿಗಳನ್ನು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿಗೆ ಕರೆತಂದು ಮಾಹಿತಿ ತಂತ್ರಜ್ಞಾನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ಆಗಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಯ ಆರಂಭದ ದಿನಗಳಲ್ಲಿದುದರಿಂದ ಕೊಂಚ ಕಷ್ಟವಾಗುತ್ತಿತ್ತು. ಆದರೆ, ಕೋರೋನದ ನಂತರದ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೂ ಹೆಚ್ಚಿನ ಜ್ಞಾನವಿದ್ದು, ಈಗ ರಸಪ್ರಶ್ನೆ ಕಾರ್ಯಕ್ರಮವನ್ನು ಸುಲಭವಾಗಿ ಹೆದರಿಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ಉಪಯೋಜನ ಸಮನ್ವಯಾಧಿಕಾರಿ ರೇಣುಕಮ್ಮ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಇದೊಂದು ಸುವರ್ಣ ಅವಕಾಶವೆಂದು, ಕೈಗೆಟುಕುವ ಮೊಬೈಲ್ ಎಲ್ಲರ ಬಳಿ ಇದ್ದು ಇದರ ಸದುಪಯೋಗವನ್ನು ಪಡಿಸಿಕೊಂಡು ಆಂಗ್ಲ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಲು ಮತ್ತು ತಂತ್ರಜ್ಞಾನದ ಬಗ್ಗೆಯೂ ಹೆಚ್ಚಿನ ಮಾಹಿತಿ ಪಡೆಯಲು ಸಹಾಯಕಾರಿಯಾಗಿರುವುದರಿಂದ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಗೋಪಾಲ್ ಗೌಡ, ಟಿ. ಲಕ್ಷ್ಮಿ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ನಾಗರಾಜು, ನಿವೃತ್ತ ಗಣಿತ ವಿಷಯ ಪರೀಕ್ಷಕ ಎಸ್ ಲೋಕೇಶ್, ಉರ್ದು ಶಿಕ್ಷಣ ಸಂಯೋಜಕರಾದ ಜಾಕೀರ್ ಪಾಷಾ, ವಿಜ್ಞಾನ ವಿಷಯ ಪರಿವೀಕ್ಷಕರಾದ ನಂಜರಾಜು, ತಾಂತ್ರಿಕ ಸಹಾಯಕರಾದ ಹೆಚ್.ಎಂ.ರಶ್ಮಿ, ಕಲಾ ಶಿಕ್ಷಕರಾದ ಡಿ.ಎನ್.ವೆಂಕಟೇಶ್, ರಮೇಶ್ ಇನ್ನಿತರರಿದ್ದರು.