ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಜಲಜೀವನ್ ಯೋಜನೆಯಡಿ 4 ಕೋಟಿ ರೂ.ಗಳ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗಣಿಗ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕ್ಷೇತ್ರವ್ಯಾಪ್ತಿಯ ಕೊನೆಭಾಗ ಶಿವಪುರ ಗ್ರಾಮಪಂಚಾಯಿತಿಯ ಗಣಿಗ ಗ್ರಾಮ ಹೊರತು ಪಡಿಸಿ ಉಳಿದ ಮಾಚಗೌಡನಹಳ್ಳಿ, ಶಿವಪುರ, ಅರಿಸಿನಗೆರೆ, ಶಿವಪುರಕಾಲೋನಿ, ಮೋಳೆಕೊಪ್ಪಲು, ವಡ್ಡರಕೊಪ್ಪಲು ಗ್ರಾಮಗಳಲ್ಲಿನ ಮನೆ ಮನೆಗಳಿಗೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅರಿಶಿನಗೆರೆ ಗ್ರಾಮದಲ್ಲಿ ಶಿವಪುರ ರಸ್ತೆಕಡೆಯಿಂದ ಬೊಮ್ಮನಹಳ್ಳಿ ಕಡೆ ಹೋಗುವ ಸಿ.ಸಿ ರಸ್ತೆ ಅಭಿವೃದ್ದಿ ಕಾಮಗಾರಿಗೆ 3 ಲಕ್ಷದ 80 ಸಾವಿರ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಗ್ರಾಮದಲ್ಲಿರುವ ಮಾರಮ್ಮನ ದೇವಾಲಯ ಹೆಬ್ಬಾಗಿಲು ಸಿ.ಸಿ ರಸ್ತೆ ಅಭಿವೃದ್ದಿಗೆ 5ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಗಣಿಗ ಗ್ರಾಮವನ್ನು ಅಭಿವೃದ್ದಿ ಪಡಿಸಿಲು ಹೊಸ ಯೋಜನೆ ಸಿದ್ದಗೊಳ್ಳುತ್ತಿದೆ, ಶಿವಪುರ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿ ಮಾಡುವುದು ನಮ್ಮ ಕನಸಾಗಿದೆ, ಕ್ಷೇತ್ರದ ಕೊನೆ ಭಾಗವಾಗಿರುವ ಕುಗ್ರಾಮಗಳನ್ನು ಅಭಿವೃದ್ದಿ ಪಡಿಸುವ ಸಂಕಲ್ಪ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಸತೀಶ್ ಸಿದ್ದರೂಢ, ಶಿವಪುರ ಗ್ರಾ.ಪಂ.ಅಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಶೈಲಜಾ, ಶಿವರಾಂ, ಶ್ರೀಕಾಂತ್, ರಮೇಶ್, ನಿಂಗರಾಜ್, ಪ್ರಕಾಶ್, ಇಂಜನಿಯರ್ ನಾಗರಾಜ್ ಮತ್ತಿತರರಿದ್ದರು.