ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಡಾ. ಕೆ ಅನ್ನದಾನಿ ಮಳವಳ್ಳಿ ತಾಲ್ಲೂಕಿನ ರಾವಣಿ, ಕ್ಯಾತನಹಳ್ಳಿ, ದೊಡ್ಡಭೂವಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಶಾಸಕ ಡಾ. ಕೆ.ಅನ್ನದಾನಿ ಮಾತನಾಡಿ, ರೈತರ ಬಗ್ಗೆ ಅಪಾರವಾಗಿ ಕಾಳಜಿ ವಹಿಸುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೈ ಬಲ ಪಡಿಸಲು ಜೆಡಿಎಸ್ಗೆ ಮತ ನೀಡಬೇಕೆಂದು ಕೋರಿದರು.
ತನ್ನ ಅಧಿಕಾರದ ಅವಧಿಯಲ್ಲಿ ಮೂರು ವರ್ಷ ಕೊರೋನದ ಸಂಕಷ್ಟದ ನಡುವೆಯೂ ಸಿಕ್ಕಿದ 2 ವರ್ಷಗಳಲ್ಲಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು ಶ್ರಮಿಸಿದ್ದೇನೆ, ಕನಕಭವನ, ಬಸವಭವನ,ಒಕ್ಕಲಿಗರ ಭವನ ನಿರ್ಮಾಣಕ್ಕೆ ಒತ್ತು ನೀಡಿದ್ದೇನೆ, ಹಲವು ಭವನಗಳ ನಿರ್ಮಾಣ ಮಾಡಲು ನಿವೇಶನ ನೀಡಿದ್ದೇನೆಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರ ಆಗತ್ಯವಸ್ತುಗಳನ್ನು ಬೆಲೆ ಏರಿಕೆ ಮಾಡುವುದರ ಮೂಲಕ ಬಡವರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ರಾಜ್ಯಕ್ಕೆ ಪ್ರದೇಶಿಕ ಪಕ್ಷ ಆಗತ್ಯವಿರುವುದರಿಂದ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಭ್ರಷ್ಟಚಾರದಲ್ಲಿ ಹಣ ಮಾಡಿದ ವ್ಯಕ್ತಿಯೊಬ್ಬ ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಹಣ ಚೆಲ್ಲುವುದರ ಮೂಲಕ ಯುವಕರನ್ನು ದಿಕ್ಕು ತಪ್ಪಿಸುತ್ತಿರುವ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕೆಂದು ಬಿಜೆಪಿ ಅಭ್ಯರ್ಥಿ ಮುನಿರಾಜು ವಿರುದ್ದ ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಡಾ.ಅನ್ನದಾನಿ ಪುತ್ರ ಅಂಶು ಅನ್ನದಾನಿ, ಕುಮಾರ್, ನಾಗರಾಜು, ಶ್ರೀಧರ್, ರಾಜೇಶ್, ಸತೀಶ್ ಸದಾನಂದ ಸೇರಿದಂತೆ ಇತರರು ಇದ್ದರು.