ಸಚಿವ ಚಲುವರಾಯಸ್ವಾಮಿ ಅವರನ್ನು ನಾಯಕರನ್ನಾಗಿ ರೂಪಿಸಿದ ಪಕ್ಷ ಮತ್ತು ವರಿಷ್ಠರ ಬಗ್ಗೆ ನಾಚಿಕೆ ಹಾಗೂ ಮರ್ಯಾದೆ ಇಟ್ಟುಕೊಂಡು ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಮಂಡ್ಯ ಜಿಲ್ಲೆಯ ಅಭಿವೃದ್ದಿಯ ಚಿಂತಕ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿದರೆ ರಸ್ತೆಗಿಳಿದು ಪ್ರತಿಭಟಿಸಬೇಕಾಗುತ್ತದೆ ಮಂಡ್ಯದ ಜೆಡಿಎಸ್ ನಾಯಕರು ಎಚ್ಚರಿಕೆ ನೀಡಿದರು.
ಮಂಡ್ಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಕೆ.ಟಿ.ಶ್ರೀಕಂಠಗೌಡ, ಡಾ.ಕೆ.ಅನ್ನದಾನಿ ಅವರು ಮಾತನಾಡಿ, ರಾಜ್ಯದ ಪ್ರತಿಷ್ಠಿತ ರಾಜಕೀಯJDS leaders ಕುಟುಂಬವೊಂದರ ಸದಸ್ಯ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಅನಿವಾರ್ಯತೆಯಿಂದ ಸಿಎಂ ಮಾಡಿದ್ದಾರೆಯೇ ಹೊರತು ಚಲುವರಾಯಸ್ವಾಮಿ ಜೊತೆ ಇದ್ದ ಬಾಲಕೃಷ್ಣ, ಪುಟ್ಟಣ್ಣ ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸಬೇಡಿ
ಮನ್ ಮುನ್ ಅಧ್ಯಕ್ಷರ ಚುನಾವಣೆ ನಡೆಯುವ ದಿನದಂದು ಇಬ್ಬರು ಜೆಡಿಎಸ್ ನಿರ್ದೇಶಕರನ್ನು ಅಮಾನತು ಮಾಡಿ, ಸಂಜೆ ವೇಳೆಗೆ ಅಮಾನತ್ತು ಆದೇಶ ವಾಪಸ್ ಪಡೆದ ನಡೆ ಖಂಡನೀಯ ಎಂದು ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಲು ಪಕ್ಷದ ನೆರಳು ಹಾಗೂ ನಾಯಕತ್ವ ಅಗತ್ಯ, ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ನಾಯಕರ ಹಿರಿಮೆ ದೊಡ್ಡದು, ಚಲುವರಾಯಸ್ವಾಮಿ ಅವರನ್ನು ಜಿ.ಪಂ.ಸದಸ್ಯರನ್ನಾಗಿಸಿ, ಶಾಸಕ, ಸಂಸದ, ಸಚಿವನ್ನಾಗಿಸಿದ್ದ, ಜೆಡಿಎಸ್ ಪಕ್ಷದ ವರಿಷ್ಠ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಗೆದ್ದು, ಸಚಿವನಾಗಿದ್ದೆನೆಂಬ ಭ್ರಮೆಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ, ಇದನ್ನು ಮಂಡ್ಯದ ಜನತೆ ಸಹಿಸುವುದಿಲ್ಲ ಎಂದರು.
7 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ತಿಲಕ್ ಎಂಬ ಮೊರಾರ್ಜಿ ಶಾಲೆಯ ಶಿಕ್ಷಕನನ್ನು ಕೆಲಸದಿಂದ ತೆಗೆದು ಹಾಕಿರುವ ಮಾಜಿ ಸಚಿವರ ನಡೆ ಸರಿಯಲ್ಲ, ತಿಲಕ್ ತಂದೆ ನಿವೃತ್ತ ಶಿಕ್ಷಕರಾಗಿದ್ದು, ಅವರನ್ನು ಕರೆಸಿ ಅವಮಾನಿಸಿದ್ದ ಬೆಳವಣಿಗೆ ಇಂಬು ನೀಡುವಂತೆ ಹಾಲಿ ಸಚಿವರು ಶಿಕ್ಷಕರ ನೇಮಕದ ವಿಚಾರದಲ್ಲಿ ತಮ್ಮ ಹಿಂಬಾಲಕರ ಮಾತು ಕೇಳುತ್ತಿರುವುದು ಸರಿಯಲ್ಲ, ಈ ಎಲ್ಲಾ ಬೆಳವಣಿಗೆಗಳು ಪ್ರಜಾಫ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದಂತೆ ಆಗುತ್ತದೆ, ಇಂತಹ ಘಟನೆಗಳು ಮುಂದುವರಿದರೆ ರಸ್ತೆಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಮಾನ್ಯ ಗುತ್ತಿಗೆದಾರನಾಗಿದ್ದ ಚಲುವರಾಯಸ್ವಾಮಿ ಜಿ.ಪಂ. ಉಪಾಧ್ಯಕ್ಷ, ಶಾಸಕ, ಸಂಸದ ಹಾಗೂ ಸಚಿವಗಿರಿ ನೀಡಿದವರು ಯಾರೆಂಬ ಅರಿವಿಲ್ಲದೇ ಬೆಳೆಸಿದ ನಾಯಕರು, ಆಶ್ರಯ ನೀಡಿದ ಪಕ್ಷವನ್ನು ಕನಿಷ್ಟ ಮಟ್ಟದಲ್ಲಿ ಟೀಕಿಸುವ ನಿಮ್ಮ ಹಿನ್ನೆಲೆ ಏನೆಂಬುದು ಜಿಲ್ಲೆಯ ಜನರಿಗೆ ಮನವರಿಕೆ ಆಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಚುನಾವಣೆ ನಿರಂತರ ಪ್ರಕ್ರಿಯೆಯಾಗಿದ್ದು, ನಿಮ್ಮ ನಡವಳಿಕೆಯನ್ನು ಜನ ಅವಲೋಕಿಸುತ್ತಾರೆ. ಸಭ್ಯ ರಾಜಕಾರಣಕ್ಕೆ ಸೊಪ್ಪು ಹಾಕಿ, ಇತಿ -ಮಿತಿ ಮೀರಿ ಕಾರ್ಯ ನಿರ್ವಹಿಸಿದರೆ, ಜನತೆ ಪಾಠ ಕಲಿಸಲಿದ್ದಾರೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾಗಿರುವ ಯೋಜನೆಗಳಿಗೆ ಅನುದಾನ ತರುವ ಪ್ರಯತ್ನವನ್ನಾದರೂ ಮಾಡಿ ಎಂದು ಸವಾಲು ಹಾಕಿದರು.
ಶಾಸಕ ಸುರೇಶ್ ಗೌಡ ಮಾತನಾಡಿ, ಅಧಿಕಾರದಲ್ಲಿದ್ದಾಗ ಮದವೇರಿ ಮೆರೆದವರು ಯಾರೂ ಉಳಿದಿಲ್ಲ, ಮನ್ ಮುಲ್ ನಿರ್ದೇಶಕರ ಅಮಾನತ್ತು ಎಷ್ಟು ಸರಿ ? ಅದೇ ರೀತಿ ಮನ್ ಮುಲ್ ನಾಮ ನಿರ್ದೇಶನಕ್ಕೆ ಎಷ್ಟು ಕೋಟಿ ಡೀಲ್ ಹಾಗೂ ಉಪವಿಭಾಗಾಧಿಕಾರಿ ಹುದ್ದೆಗೆ ಯಾವ ಡೀಲ್ ನಡೆಯುತ್ತಿದೆ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ದುಡಿದವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಿರುದು ಸರಿಯೇ ಎಂದು ಪ್ರಶ್ನಿಸಿದರು.
ಮುಂದಿನ 6 ತಿಂಗಳ ನಂತರ ಜಿಲ್ಲೆಯ ಜನತೆ ನಿಮ್ಮನ್ನು ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂಬ ಪರಿಜ್ಞಾನದಿಂದ ಜಿಲ್ಲೆ ಅಭಿವೃದ್ದಿಗೆ ಅನುದಾನ ತರಬೇಕು ಎಂದು ಆಗ್ರಹಿಸಿದರು.
ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ನಿಷ್ಠೆ ಬಗ್ಗೆ ಪ್ರಸ್ತಾಪಿಸಿರುವ ಮಾತುಗಳು ಅರ್ಥ ಹೀನವಾಗಿದೆ, ವಿವೇಚನೆಯಿಲ್ಲದೇ ಮಾತನಾಡಿರುವ ನೀವು ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಅನ್ಯ ಪಕ್ಷಕ್ಕೆ ವಲಸೆ ಹೋಗಿದ್ದೇಕೆ ? ಎಂದು ರವೀಂದ್ರ ಪ್ರಶ್ನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗಿ ಸಿಎಂ ಆಗುವಂತೆ ಒತ್ತಡ ತಂದ ಕಾಂಗ್ರೆಸ್ಸಿಗರು ಮಲ್ಲಿಕಾರ್ಜುನ ಖರ್ಗೆ ಅವರಿಗೂ ವಂಚಿಸಿದ್ದಾರೆ. ಇಂದು ನಿಮ್ಮ ಜೊತೆ ಇರುವ ಶಾಸಕ ರಮೇಶ್ ಬಾಬು ಕಾಂಗ್ರೆಸ್ ಚಿನ್ಹೆ ಮುಚ್ಚಿ ಮತ ಚಲಾಯಿಸಿ ಎಂದು ಹೇಳಿಕೆ ನೀಡಿದ್ದಾಗ ನಿಮ್ಮ ಪಕ್ಷ ನಿಷ್ಠೆ ಎಲ್ಲಿಗೆ ಹೋಗಿತ್ತು ಎಂದು ಕಿಡಿಕಾರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿಖಿಲ್ ಚೊಚ್ಚಲ ಚುನಾವಣೆಯಲ್ಲಿ ಗರ್ಭ ಹಿಸುಕಿದ ಚಲುವರಾಯಸ್ವಾಮಿ, ಗ್ಯಾರಂಟಿ ಹೆಸರಿನಲ್ಲಿ ಕೇವಲ 4 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ, ಬೇರೆಯವರು ಬಗ್ಗೆ ಟೀಕಿಸುವ ಮುನ್ನ ಗೌರವವಿರಲಿ, ಹೆಚ್.ಡಿ.ಕೆ ಇಲ್ಲದಿದ್ದರೆ ನೀವೇನಾಗಿರುತ್ತಿದ್ದೀರಿ ಎಂದು ಹರಿಹಾಯ್ದರು.