ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣದ ಆರೋಪಿಗೆ ಠಾಣೆಯಲ್ಲಿ ಜಾಮೀನು ನೀಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಎನ್.ಯತೀಶ್ ಸುಪ್ರೀಂಕೋರ್ಟ್ ಆದೇಶದಂತೆ ನಡೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆ.ಆರ್.ಎಸ್ ಠಾಣಾ ವ್ಯಾಪ್ತಿಯ ಹೊಂಗನಳ್ಳಿ ಗ್ರಾಮದಲ್ಲಿ ಕುರಿಗಾಹಿ ವ್ಯಕ್ತಿ ಒಬ್ಬ ತನ್ನ ಖಾಸಗಿ ಅಂಗವನ್ನು ಬಾಲಕಿಗೆ ತೋರಿಸಿ ಅಸಭ್ಯವಾಗಿ ನಡೆದುಕೊಂಡಿದ್ದ. ಈ ಬಗ್ಗೆ ಕೆ.ಆರ್.ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಠಾಣೆಯಲ್ಲಿ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆಂದು ಬಾಲಕಿಯ ಪೋಷಕರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ನುಡಿ ಕರ್ನಾಟಕ. ಕಾಮ್ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಎನ್.ಯತೀಶ್, 41 (ಎ) ಸೆಕ್ಷನ್ ಪ್ರಕಾರ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಆರೋಪಿಗೆ ನೋಟಿಸ್ ಕೊಟ್ಟು ನಂತರ ವಿಚಾರಣೆಗೆ ಕರೆಯಬಹುದಾಗಿದೆ. ಅದರಂತೆ ಈ ಪ್ರಕರಣದಲ್ಲೂ ಆರೋಪಿಗೆ ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದರು.
7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣದಲ್ಲಿ ಸಿಆರ್ ಪಿಸಿ 41(ಎ) ಸೆಕ್ಷನ್ ಪ್ರಕಾರ ಆರೋಪಿಗೆ ನೋಟಿಸ್ ನೀಡಬಹುದು. ಪೊಲೀಸರು ವಿಚಾರಣೆಗೆ ಕರೆದಾಗ ಆರೋಪಿ ಠಾಣೆಗೆ ಹಾಜರಾಗಬೇಕು. ವಿಚಾರಣೆಯ ಸಂದರ್ಭದಲ್ಲಿ ಆರೋಪಿಯ ಬಗ್ಗೆ ಇನ್ನಷ್ಟು ಸಾಕ್ಷಾಧಾರ ಕಲೆ ಹಾಕಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಆತನ ಬಗ್ಗೆ ನ್ಯಾಯಾಲಯ ನಿರ್ಧಾರ ಕೈಗೊಳ್ಳತ್ತದೆ ಎಂದು ವಕೀಲ ಸುರೇಶ್ ತಿಳಿಸಿದರು.