ವಿದ್ಯಾರ್ಥಿಗಳು ಪಾಠ ಕಲಿಸಿದ ಗುರುಗಳು ಹಾಗೂ ಮಕ್ಕಳ ಉನ್ನತ ಜೀವನಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ತಂದೆ ತಾಯಿಯನ್ನು ಪೂಜ್ಯ ಭಾವನೆಯಿಂದ ಗೌರವಿಸುವ ಮೂಲಕ ಮುನ್ನಡೆದು ಸಾಧನೆ ಮಾಡಬೇಕೆಂದು ರಾಜ್ಯಸಭೆಯ ಮಾಜಿ ಉಪ ಸಭಾಪತಿ ಡಾ.ಕೆ.ರೆಹಮಾನ್ ಖಾನ್ ಹೇಳಿದರು..
ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ತಮ್ಮ ರಾಜ್ಯಸಭಾ ಸದಸ್ಯರ ಅನುದಾನ 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ಶಾಲಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಹುಟ್ಟೂರಿನ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ನಾನು ಓದು ಕಲಿತು ವಿದ್ಯಾವಂತನಾಗಿ ಏನನ್ನಾದರೂ ಸಾಧನೆ ಮಾಡಬೇಕು ಎಂಬ ಛಲ ಮೂಡಿದ್ದು ಕೆ.ಆರ್. ಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ, ನಾನು ನನ್ನ ಪ್ರಾಥಮಿಕ ಶಾಲೆಯ ಗುರುಗಳನ್ನು ಅವರ ಅಂತಿಮ ದಿನಗಳ ವರೆಗೂ ಗೌರವಿಸುವ ಮೂಲಕ ಸಂಪರ್ಕದಲ್ಲಿದ್ದೆ. ವಿದ್ಯಾರ್ಥಿಗಳು ಗುರುಗಳು ಹಾಗೂ ತಂದೆ ತಾಯಿಗಳನ್ನು ಗೌರವಿಸಿದರೆ ಅದು ನಮ್ಮ ಇಡೀ ಜೀವಿತವನ್ನೇ ಅವರ ಆಶೀರ್ವಾದದ ಬಲದಿಂದ ಕಾಪಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವ ಜನರು ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕೆಂದರು.
ಶಾಸಕ ಎಚ್ ಟಿ ಮಂಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ ಆರ್ ಪೇಟೆ ತಾಲೂಕಿಗೆ ಕಿರೀಟ ಪ್ರಾಯರಾಗಿರುವ ರೆಹಮಾನ್ ಖಾನ್ ಅವರು ರಾಜ್ಯಸಭೆಯ ಉಪಸಭಾಪತಿಗಳಾಗಿ, ಕೇಂದ್ರದ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜನ್ಮಭೂಮಿಯ ಹೆಸರನ್ನು ದೇಶಾದ್ಯಂತ ಬೆಳಗಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕಾಗಿ ತಮ್ಮ ಸಂಸತ್ ಅನುದಾನದಿಂದ ನಾಲ್ಕು ಕೊಠಡಿಗಳನ್ನು ನಿರ್ಮಿಸಿ ಕೊಡುವ ಮೂಲಕ ತಾವು ಓದು ಕಲಿತ ಶಾಲೆಗೆ ನೆರವಾಗಿದ್ದಾರೆ. ಇಂತಹ ಗುಣಗಳು ಎಲ್ಲಾ ಸಾಧಕರಲ್ಲಿಯೂ ಮೂಡಿ ಬರಬೇಕು ಎಂದು ಹೇಳಿದ ಅವರು ರೆಹಮಾನ್ ಖಾನ್ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಸನ್ಮಾನವನ್ನು ನೀಡಿ ಅಭಿನಂದಿಸಿದರು.
ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿಎಲ್ ದೇವರಾಜು, ಕೆ ಯು ಐ ಡಿ ಎಫ್ ಸಿ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಉದ್ಯಮಿಗಳಾದ ಅಹಮದ್ ಖಾನ್, ರಸೂಲ್ ಖಾನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತೋಟಪ್ಪ ಶೆಟ್ಟಿ, ಪ್ರಾಂಶುಪಾಲರಾದ ಕೆ ಮೋಹನ್, ಉಪ ಪ್ರಾಂಶುಪಾಲ ರವಿ, ದಾನಿಗಳಾದ ವೆಂಕಟಕೃಷ್ಣ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ರಾಜಯ್ಯ, ಉಪನ್ಯಾಸಕರಾದ ಚಂದ್ರಶೇಖರ್ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.