ನಮ್ಮ ಭಾಷೆ ಕನ್ನಡಕ್ಕೆ ಸರ್ವಶ್ರೇಷ್ಠಯ ಜೇಷ್ಠತೆ ಇದೆ, ಭಾಷಾ ಸಾಮರ್ಥ್ಯ ನಮ್ಮಲ್ಲಿ ಅಗಾಧವಾಗಿದೆ, ನಾವು ನವೆಂಬರ್ ತಿಂಗಳ ಕನ್ನಡಿಗರಾಗಬಾರದು, ಜನ್ಮ ಜನ್ಮದುದ್ದಕ್ಕೂ ಕನ್ನಡಿಗರು ಎನ್ನುವ ಹೆಮ್ಮೆ ನಮ್ಮದಾಗಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಹೇಳಿದರು.
ಮಂಡ್ಯ ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕವಿಕಾವ್ಯ ಕಮ್ಮಟ ಮಾಲಿಕೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ,ಮಾಲಿಕೆ-4 ಜಿಲ್ಲಾ ಬರಹಗಾರರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಲಿಂಗು ಗಾಣದಾಳು ಮಾತನಾಡಿ, ಕನ್ನಡದ ತೇರನ್ನು ಎಳೆಯೊದಿಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಭಿಮಾನ ಮೂಡಿಸಬೇಕು, ಸಾಹಿತ್ಯ ಪರಿಷತ್ತಿನ ಐತಿಹ್ಯ, ಧ್ಯೇಯಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ, ಕನ್ನಡ ಸಾಹಿತ್ಯದತ್ತ ಸೆಳೆಯಬೇಕು
ಮಂಡ್ಯ ನೆಲದಲ್ಲಿ ಇದುವರಗೆ 2 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ, 2023ರಲ್ಲಿ ಈ ನೆಲದಲ್ಲಿಯೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿ, ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಿತ್ತು, ನಾಡಿನಲ್ಲಿ ಬರಗಾಲ ಘೊಷಣೆಯಾದ ಹಿನ್ನಲೆಯಲ್ಲಿ ಮುಂದೂಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕವಿ ಕೊತ್ತತ್ತಿರಾಜು ಉಪನ್ಯಾಸ ನೀಡಿದರು, ಸುಸ್ವರ ಸಂಗೀತ ಗಾಯನ ತಂಡದಿಂದ ಕನ್ನಡ ಕವಿಗಳ ಸುಗಮ ಸಂಗೀತ ನಡೆಯಿತು.
ಕಾರ್ಯಕ್ರಮದಲ್ಲಿ ಕಸಾಪ ನಗರ ಘಟಕ ಅಧ್ಯಕ್ಷೆ ಸುಜಾತಕೃಷ್ಣ, ಹೋಬಳಿ ಘಟಕ ಅಧ್ಯಕ್ಷ ಮಹದೇವು, ಗೌರವಾಧ್ಯಕ್ಷ ಲಿಂಗೇಗೌಡ, ಕಾರ್ಯದರ್ಶಿ ಚಿಕ್ಕತಿಮ್ಮಯ್ಯ, ರಮೇಶ್ ಮತ್ತಿತರರಿದ್ದರು.