ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡದ ಹಿರಿಯ ನಟ ಟಿ.ಎಸ್ ಲೋಹಿತಾಶ್ವರವರು ಇಂದು ನಿಧನ ಹೊಂದಿದ್ದಾರೆ.
80 ವರ್ಷದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವಾಗಲೇ ಅವರಿಗೆ ಹೃದಯಾಘಾತವಾಗಿತ್ತು. ಆ ನಂತರ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚೇತರಿಕೆ ಕಾಣದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ತಮ್ಮ ವಿಶಿಷ್ಟ ಧ್ವನಿ ಮೂಲಕ ಖ್ಯಾತಿ ಗಳಿಸಿದ್ದ ಲೋಹಿತಾಶ್ವರವರು ಸುಮಾರು 500 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಖಳನಟರಾಗಿ, ಪೋಷಕ ನಟರಾಗಿ ಅಭಿನಯಿಸಿದ್ದಾರೆ. ಅವರು ಸ್ನೇಹಲೋಕ, ಸಾಂಗ್ಲಿಯಾನ, ಅಭಿಮನ್ಯು, ಸಿಂಹದ ಮರಿ, ಸಂಭವಾಮಿ ಯುಗೇ ಯುಗೇ, ಲಾಕಪ್ ಡೆತ್, ಸಮಯದ ಗೊಂಬೆ, ಸಂಗ್ರಾಮ, ಸಾರಥಿ, ಎಕೆ47 ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಅಲ್ಲದೆ ಶಂಕರ್ನಾಗ್ ಅಭಿನಯದ ಮಾಲ್ಗುಡಿ ಡೇಸ್, ಗಿರೀಶ್ ಕಾಸರವಳ್ಳಿಯವರ ಗೃಹಭಂಗ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ಸಹ ಅಭಿನಯಿಸಿದ್ದರು.
ತುಮಕೂರಿನವರಾದ ಅವರು ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರು. ನಾಟಕಕರರೂ ಆದ ಅವರು ಆನಂತರ ಚಲನಚಿತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.