ದ್ವಿತೀಯ ಪಿಯುಸಿ ತೇರ್ಗಡೆ ನಂತರ ಇಂಜಿನಿಯರಿಂಗ್ ವಿಭಾಗದ ವಿವಿಧ ಕೋರ್ಸ್ ಗಳ ಪ್ರವೇಶಾತಿ ಕುರಿತ ಕೆಸಿಇಟಿ ಕೌನ್ಸಿಲಿಂಗ್ ಪ್ರಕ್ರಿಯೆ ಕುರಿತು ಉಪಯುಕ್ತ ಮಾಹಿತಿ ಒದಗಿಸುವ ‘ಓಪನ್ ಡೇ’ ಕಾರ್ಯಾಗಾರವನ್ನು ಜಿಲ್ಲೆಯ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾದ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಜೂ.23ರ ಭಾನುವಾರದಂದು ಆಯೋಜಿಸಿದೆ.
ಈ ಕಾರ್ಯಕ್ರಮದ ಮಾಹಿತಿ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಎಂ.ನಂಜುಂಡಸ್ವಾಮಿ ಅವರು, ನಮ್ಮ ಕಾಲೇಜಿನಲ್ಲಿ ಸಿವಿಲ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್, ಇಎನ್’ಸಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಡಾಟಾ ಸೈನ್ಸ್, ಎಂಸಿಎ ಸೇರಿದಂತೆ 11 ಕೋರ್ಸ್ ಗಳು ಲಭ್ಯವಿದ್ದು, ಪ್ರಥಮ ಬಾರಿಗೆ ನಮ್ಮ ಕಾಲೇಜು ಆವರಣದಲ್ಲಿ ಇಂಜಿನಿಯರಿಂಗ್ ಅಪೇಕ್ಷಿತ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಪಿಇಟಿ ಅಧ್ಯಕ್ಷರಾದ ಕೆ.ಎಸ್.ವಿಜಯ್ ಆನಂದ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇಂಜಿನಿಯರಿಂಗ್ ಶಿಕ್ಷಣದ ಪ್ರಾಮುಖ್ಯತೆ ಮತ್ತು ಒಳನೋಟಗಳನ್ನು ಹಂಚಿಕೊಳ್ಳುವ ಹಾಗೂ ಕೆಸಿಇಟಿ ಕೌನ್ಸಿಲಿಂಗ್ ಪ್ರಕ್ರಿಯೆಯ ಉಪಯುಕ್ತ ಮಾಹಿತಿಯನ್ನು ಕಾರ್ಯಾಗಾರದಲ್ಲಿ ವಿವರಿಸಲಾಗುವುದೆಂದರು.
ರಾಜ್ಯ ಸಿಇಟಿ ಸೆಲ್ ನ ತಜ್ಞರಲ್ಲೊಬ್ಬರಾಗಿರುವ ಉದಯ್ ಶಂಕರ್ ರವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಲಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಇಂಜಿನಿಯರಿಂಗ ಕೋರ್ಸ್ ಗಳು ಹಾಗೂ ಪ್ರವೇಶ ಪ್ರಕ್ರಿಯೆಗಳ ಲಭ್ಯತೆ ಬಗ್ಗೆ ವಿವರಣೆ ದೊರೆಯಲಿದ್ದು, ಹೆಚ್ಚಿನ ವಿದ್ಯಾರ್ಥಿ ಹಾಗೂ ಪೋಷಕರು ಆಗಮಿಸುವಂತೆ ಮನವಿ ಮಾಡಿದರು.
ಭವಿಷ್ಯದ ಇಂಜಿಯರಿಂಗ್ ಕ್ಷೇತ್ರದ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲು ಭೋದಕ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಆಗಮಿಸಲಿದ್ದು, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಸುಮಾರು 1.500 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿನಯ್ ಎಸ್ ಹಾಗೂ ಮಾಧ್ಯಮಾಧಿಕಾರಿ ಡಾ.ಕೋದಂಡರಾಮ ಉಪಸ್ಥಿತರಿದ್ದರು.