ಕಾವೇರಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ಸೆಪ್ಟೆಂಬರ್ 26 ಮಂಗಳವಾರ ಕರೆಯಲಾಗಿರುವ ಕೆ.ಆರ್.ಪೇಟೆ ಬಂದ್ ಅನ್ನು ಶೇಕಡ ನೂರಕ್ಕೆ ನೂರರಷ್ಟು ಯಶಸ್ವಿಗೊಳಿಸುವ ದಿಕ್ಕಿನಲ್ಲಿ ಕಾವೇರಿ ಹೋರಾಟ ಸಮಿತಿಯ ಸದಸ್ಯರು, ಕೆ ಆರ್ ಪೇಟೆ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದರು.
ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6ರವರೆಗೆ ವಾಹನಗಳ ಸಂಚಾರ ಸೇರಿದಂತೆ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ರಾಜ್ಯಕ್ಕೆ ಹೊಸ ಸಂದೇಶವನ್ನು ನೀಡುವ ಮಾದರಿಯಲ್ಲಿ ಕೆ ಆರ್ ಪೇಟೆ ಬಂದ್ ಅನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳು ಹಾಗೂ ರೈತ ಬಾಂಧವರು ಒಂದಾಗಿ ಹೋರಾಟ ಮಾಡಬೇಕೆಂದು ಮುಖಂಡರು ಮನವಿ ಮಾಡಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯದ ರೈತರಿಗಾಗಿರುವ ಅನ್ಯಾಯವನ್ನು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಮರುಪರಿಶೀಲನೆ ಮಾಡಿ ರಾಜ್ಯದ ರೈತರಿಗಾಗಿರುವ ಅನ್ಯಾಯವನ್ನು ಸರಿಪಡಿಸಲೇಬೇಕು ಎಂದು ಆಗ್ರಹಿಸಿದ ಕಾವೇರಿ ಹೋರಾಟ ಸಮಿತಿಯ ಸಂಚಾಲಕ ಮರುವನಹಳ್ಳಿ ಶಂಕರ್ ಹಾಗೂ ಎಲ್ಲಾ ಸಂಘಟನೆಗಳ ಕಾರ್ಯಕರ್ತರು, ನಾಳೆ ಬೆಳಗ್ಗೆ 8 ಗಂಟೆಯಿಂದಲೇ ಪಟ್ಟಣದಾದ್ಯಂತ ಸಂಚರಿಸಿ ಕೆ. ಆರ್.ಪೇಟೆ ಬಂದ್ ಯಶಸ್ವಿಯಾಗುವಂತೆ ನೋಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ಹೊನ್ನೇನಹಳ್ಳಿ ವೇಣು, ಸಮೀರ್, ಕಾಂತರಾಜು, ಚೇತನ್ ಕುಮಾರ್, ಮದನ್, ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪುರಸಭಾ ಸದಸ್ಯರಾದ ಬಸ್ ಸಂತೋಷ್ ಕುಮಾರ್, ಕೆ.ಎಸ್.ಪ್ರಮೋದ್, ಡಿ ಪ್ರೇಮ್ ಕುಮಾರ್, ರಾಜಸ್ಥಾನ್ ಸೇವಾ ಸಮಿತಿಯ ಸಂಚಾಲಕ ರಮೇಶ್ ಚೌಧರಿ, ವಾಲ್ಮೀಕಿ ನಾಯಕ ಸಮಾಜದ ಮುಖಂಡ ಅಗ್ರಹಾರಬಾಚಹಳ್ಳಿ ಜಗದೀಶ್ ಸೇರಿದಂತೆ ನೂರಾರು ಹೋರಾಟಗಾರರು ರೈತ ಮುಖಂಡರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.