ಕಂದಾಯ ಇಲಾಖೆಯ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕೋಟ್೯ಗಳಲ್ಲಿರುವ ಕೇಸ್ ಗಳು ಗಣನೀಯವಾಗಿ ಕಡಿಮೆಯಾಗಿದೆ. ಕಂದಾಯ ಇಲಾಖೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿಗಾಗಿ ಕಾನೂನಿನಲ್ಲಿ 90 ದಿನಗಳು ಗಡವು ಇದೆ, ಆದರೆ 76 ದಿನಗಳಲ್ಲಿ ವಿಲೇವಾರಿಯಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.
ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಇಲಾಖೆ ಜವಬ್ದಾರಿ ತೆಗೆದುಕೊಂಡಾಗ ಜನ ರೈತರು ಕಚೇರಿಗೆ ಅಲೆಯುವುದನ್ನು ಕಳೆದ ಒಂದು ವರ್ಷದಿಂದ ಆನೇಕ ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಕಡಿಮೆಯಾಗಿದೆ ಎಂದರು.
ತಹಶೀಲ್ದಾರ್ ಕೋಟ್೯ನಲ್ಲಿ ಒಂದು ವರ್ಷ ಅವಧಿಗಿಂತ ಬಾಕಿ ಇದ್ದ 2207 ಕೇಸ್ ಗಳು ವಿಲೆ ಮಾಡುವ ಉದ್ದೇಶದಿಂದ ಅಭಿಯಾನ ಮಾಡಿದ ಮೇಲೆ 2207 ಕೇಸ್ ಗಳ ಪೈಕಿ ಒಂದು ವರ್ಷದ ನಂತರ ಕೇವಲ 46 ಕೇಸ್ ಅಷ್ಟೇ. ಶೇ.98ರಷ್ಟು ಪ್ರಕರಣಗಳು ವಿಲೇವಾರಿಯಾಗಿವೆ ಎಂದರು.
ಹಳೇ ಕೇಸ್ ಗಳ ವಿಲೇವಾರಿ
ಎಸಿ ಕೋರ್ಟ್ ಗೆ ಬಂದರೆ, ಅಲ್ಲಿ ಪರಿಸ್ಥಿತಿ, ಒಂದು ವರ್ಷಕ್ಕಿಂತ ಮುಂಚೆ ಇರುವ ಕೇಸ್ ಗಳೇ 50359 ಕೇಸ್ ಗಳಿತ್ತು. ಹಳೇ ಕೇಸ್ ಗಳ ವಿಲೇವಾರಿ ಅಭಿಯಾನ ಮಾಡಿದ ಮೇಲೆ, ಒಂದು ವರ್ಷದ ಅವಧಿಯಲ್ಲಿ ಸುಮಾರು ಹಳೇ ಕೇಸ್ ಗಳನ್ನೆ 36 ಸಾವಿರ ವಿಲೇವಾರಿ ಮಾಡಿದ್ದೇವೆ. 25 ಸಾವಿರ ಕೇಸ್ ಗಳು ಬಾಕಿ ಇವೆ ಎಂದರು.
ಎಸಿ ಕೋರ್ಟ್ ಲ್ಲಿ 6 ತಿಂಗಳ ಅವಧಿಯಲ್ಲಿ ಕೇಸ್ ವಿಲೇವಾರಿ ಮಾಡಬೇಕು. ಆದರೆ, 32787 ಕೇಸ್ ಗಳು ಎಸಿ ಕೋರ್ಟ್ ನಲ್ಲಿ 5 ವರ್ಷದ ಅವಧಿ ಮೀರಿದ ಪ್ರಕರಣಗಳು ಬಾಕಿ ಉಳಿದಿದ್ದು ಅವುಗಳನ್ನ ವಿಲೇವಾರಿ ಮಾಡಲು ವಿಶೇಷ ಆದ್ಯತೆ ಕೊಟ್ಟು 32 ಸಾವಿರ ಕೇಸ್ ಗಳ ಪೈಕಿ, ಸುಮಾರು24 ಸಾವಿರ ಕೇಸ್ ಗಳನ್ನು ವಿಲೇವಾರಿ ಮಾಡಿದ್ದೇವೆ, 6800 ಕೇಸ್ ಬಾಕಿ ಇವೆ ಎಂದರು.
ಮಂಡ್ಯ ತೆಗೆದುಕೊಂಡರೆ ಕಳೆ ವರ್ಷ 5670 ಕೇಸ್ ಇತ್ತು. ನಾವು ಅಧಿಕಾರಕ್ಕೆ ಬಂದ ನಂತರ 2630 ಕೇಸ್ ಬಂದಿದೆ. 1616 ಕೇಸ್ ಬಾಕಿ ಇವೆ ಎಂದರು.
ಆರ್.ಟಿ.ಸಿ ಗೆ ಆಧಾರ್ ಜೋಡಣೆ ಅಭಿಯಾನ
ರಾಜ್ಯದಲ್ಲಿ ಆರ್.ಟಿಸಿ ಗೆ ಆಧಾರ್ ಜೋಡಣೆ ಅಭಿಯಾನ ಮಾಡಿ ಶೇ.85 ರಷ್ಟು ಫೈಲ್ ಗಳನ್ನು ಪರಿಶೀಲನೆ ನಡೆಸಿದ್ದೇವೆ. ಆಧಾರ್ ಜೋಡಣೆಯಿಂದ ಯಾರದೋ ಭೂಮಿಯನ್ನ ಇನ್ಯಾರೋ ಲಪಟಾಯಿಸಲು ಸಾಧ್ಯವಿಲ್ಲ. ದೇಶದಲ್ಲೇ ಕರ್ನಾಟಕ ಆಧಾರ್ ಜೋಡಣೆಯನ್ನು ಹೆಚ್ಚು ಮಾಡಿದೆ ಎಂದರು.
ರಾಜ್ಯದಲ್ಲಿ ಲ್ಯಾಂಡ್ ಬೀಟ್ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸರ್ಕಾರಿ ಭೂಮಿ ಎಷ್ಟಿವೆ ಎಂಬುದು ಗೊತ್ತಾಗಿದೆ 14.5 ಲಕ್ಷ ಸರ್ಕಾರಿ ಭೂಮಿ ಇದೆ. ಯಾವ ಜಿಲ್ಲೆ, ಯಾವ ತಾಲ್ಲೂಕಿನ ಲ್ಲಿ ಎಷ್ಟಿದೆ, ಅದರ ವಿಸ್ತೀರ್ಣ ಎಷ್ಟು. ಒಂದೊಂದು ಸರ್ವೇ ನಂಬರಿನಲ್ಲಿ ಎಷ್ಡಿದೆ, ಎಲ್ಲಿ ಒತ್ತುವರಿಯಾಗಿದೆ, ಎಲ್ಲಿ ಒತ್ತುವರಿಯಾಗಿಲ್ಲ ಎಂಬುದನ್ನು ಗುರುತಿಸಿದ್ದೇವೆ.ಮುಂದಿನ ದಿನಗಳಲ್ಲಿ ತೆರವು ಕಾರ್ಯಚರಣೆ ಹಮ್ಮಿಕೊಳ್ಳಲಿದ್ದೇವೆ ಎಂದರು.
ರಾಜ್ಯದ ಎಲ್ಲ ಕಡೆ ಸುಮಾರು ವರ್ಷಗಳಿಂದ ಪೌತಿ ಖಾತೆ ಆಗದೆ ಉಳಿದಿದೆ. ಪೌತಿ ಖಾತೆ ಅಂದೋಲನ ಮಾಡಬೇಕಿದೆ. ಮಂಡ್ಯದಲ್ಲೇ 33000 ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ. 1.29 ಲಕ್ಷ ಪೌತಿ ಖಾತೆ ಬಾಕಿ ಇವೆ. ಅವುಗಳನ್ನು ಕೂಡ ಸಧ್ಯದಲ್ಲೇ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. ರೈತರು ಪೌತಿ ಖಾತೆಗೆ ಅರ್ಜಿ ಸಲ್ಲಿಸಿ ದಾಖಲೆಗಳೊಂದಿಗೆ ಮುಂದೆ ಬರಬೇಕು ಎಂದರು.
ಪೌತಿಖಾತೆ ಮಾಡುವುದಕ್ಕೆ ಕಂದಾಯ ಇಲಾಖೆ ತಯಾರಿದೆ
ಪೌತಿಖಾತೆ ಮಾಡುವುದಕ್ಕೆ ಕಂದಾಯ ಇಲಾಖೆ ತಯಾರಿದೆ ಆದರೆ ಎಷ್ಟೋ ಕಡೆ ಪೌತಿಖಾತೆ ಮಾಡಿಸಿ ಕೊಳ್ಳುವುದಕ್ಕೆ ಜನಗಳೇ ಮುಂದೆ ಬರುತ್ತಿಲ್ಲ. ಬಹುಶಃ ಕುಟುಂಬದಲ್ಲಿ ವ್ಯಾಜ್ಯ, ಅಣ್ಣ ತಮ್ಮಂದಿರ ನಡುವೆ ಕಲಹ, ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡುವುದಕ್ಕೆ ತಕರಾರು ಇರಬಹುದು ಆದರೆ ಜನಗಳು ಮುಂದೆ ಬಂದು ಪೌತಿಖಾತೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಸರ್ವೇ ಯಲ್ಲಿ ಡಿಡಿಎಲ್ ಆರ್, ಎಡಿಎಲ್ ಆರ್, ಕೋರ್ಟ್ ಗಳಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ 1911 ಕೇಸ್ ಬಾಕಿಯಿದ್ದು, ಬಹಳಷ್ಟು ಕೇಸ್ ಗಳನ್ನು ಇತ್ಯರ್ಥ ಮಾಡಿ 255 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ.
ರೈತರಿಗೆ 4200 ಕೋಟಿ ರೂ ಪರಿಹಾರ
ಕಂದಾಯ ಹಾಗೂ ಕೃಷಿ ಇಲಾಖೆ ವತಿಯಿಂದ ಫ್ರೂಟ್ಸ್ ನ್ನು ಅಪ್ ಡೇಟ್ ಮಾಡಿದ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ 38 ರಿಂದ 39 ಲಕ್ಷ ರೈತರಿಗೆ 4200 ಕೋಟಿ ರೂ ಪರಿಹಾರವನ್ನು ರೈತರಿಗೆ ಒದಗಿಸಲಾಗಿದೆ. ಇದು ನೇರವಾಗಿ ರೈತರ ಖಾತೆಗೆ ಹಣ ಪಾವತಿ ಮಾಡುವ ಹಿನ್ನಲೆ ಯಾವುದೇ ಅವ್ಯವಹಾರ ನಡೆಯಲು ಸಾಧ್ಯವಿಲ್ಲ. ಕಳೆದ ಬಾರಿ 28 ಲಕ್ಷ ರೈತರಿಗೆ ಪರಿಹಾರ ಒದಗಿಸಲಾಗಿತ್ತು. ಹೆಚ್ಚು ಜನರಿಗೆ ಪರಿಹಾರ ಒದಗಿದಸಿರುವುದು ಸಹ ಕಂದಾಯ ಇಲಾಖೆಯ ಸಾಧನೆ ಎಂದರು.
ಕಂದಾಯ ಇಲಾಖೆಯಿಂದ ಕೆರೆ ಅಥವಾ ಸ್ಮಾಶನ ಒತ್ತುವರಿ ಕುರಿತಂತೆ ಸರ್ವೆ ಮಾಡಿಸಿದ ನಂತರ ತೆರವುಗೊಳಿಸಿದ ನಂತರ ಅವುಗಳನ್ನು ರಕ್ಷಿಸುವುದು ಆಯಾ ಇಲಾಖೆಯ ಕರ್ತವ್ಯವಾಗಿರುತ್ತದೆ. ಸರ್ವೆಯ ನಂತರ ರಕ್ಷಿಸದಿದ್ದಲ್ಲಿ ಕೆರೆ, ಸ್ಮಶಾನ ಒತ್ತುವರಿ – ಸರ್ವೆ ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದರು.
ಕೃಷಿಯೇತರ ಜಮೀನುಗಳನ್ನು ಗುರುತಿಸಿ ಅವುಗಳನ್ನು ಭೂಮಿ ಸಾಫ್ಟ್ವೇರ್ ನಲ್ಲಿ ಫ್ಲಾಗ್ ಮಾಡುವ ಕೆಲಸವಾಗಬೇಕು ಇದರಿಂದ ಇದರಿಂದ ಆರ್.ಟಿ.ಸಿ ಆಧಾರದ ಮೇಲೆ ಸದರಿ ಸ್ಥಳಗಳ ವ್ಯವಹಾರವನ್ನು ತಡೆಯಬಹುದು ಎಂದರು.
ಸಭೆಯಲ್ಲಿ ಮಂಡ್ಯ ಶಾಸಕ ಪಿ. ರವಿಕುಮಾರ್,ಮೇಲುಕೋಟೆ ಶಾಸಕ ದರ್ಶನ ಪುಟ್ಟಣಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಪ್ರಾದೇಶಿಕ ಆಯುಕ್ತೆ ಕವಿತಾ ರಾಜರಾಂ, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಬೆಂಗಳೂರಿನ ಭೂಮಿ ಕೋಶ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಉಪಸ್ಥಿತರಿದ್ದರು.