ವರದಿ: ನ.ಲಿ.ಕೃಷ್ಣ
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬುಧವಾರ ಮದ್ದೂರಿನ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ಮಧ್ಯಾಹ್ನ ಹನ್ನೆರಡು ಗಂಟೆಗೆ ದಿಢೀರ್ ಭೇಟಿ ನೀಡಿದ ಸಚಿವರ ಜೊತೆಯಲ್ಲಿ ಶಾಸಕ ಉದಯ್ ಹಾಜರಿದ್ದರು. ಕಂದಾಯ ಇಲಾಖೆಯಲ್ಲಿ ಶೀಘ್ರ ಕೆಲಸಗಳು ಆಗಬೇಕು ಜನಸ್ನೇಹಿ ವಾತಾವರಣ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಸರ್ಕಾರ ಕೆಲಸ ನಿರ್ವಹಿಸುತ್ತಿದೆ, ಇದಕ್ಕೆ ತಾಲ್ಲೂಕು ಆಡಳಿತ ಸ್ಪಂದಿಸಬೇಕು. ಜನತೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ನಂತರ ಸಚಿವರು, ಸಬ್ ರಿಜಿಸ್ಟ್ರಾರ್ ಕಚೇರಿಗೂ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಖುದ್ದು ವೀಕ್ಷಿಸಿ ಸ್ಪಂದನಶೀಲ ಆಡಳಿತ ನೀಡಲು ತಾಕೀತು ಮಾಡಿದರು, ಸಚಿವರ ದಿಢೀರ್ ಭೇಟಿಯೂ ಸಾರ್ವಜನಿಕರ ಕೂತೂಹಲ ಕೆರಳಿಸಿತು.
ಶಾಸಕ ಉದಯ್ ಅವರು ತಾಲ್ಲೂಕು ಕಚೇರಿಯಲ್ಲಿಯೇ ತಮ್ಮ ಕಚೇರಿ ತೆರೆದು ಸಾರ್ವಜನಿಕರ ಅಹವಾಲು ಕೇಳುತ್ತಿರುವುದರ ಜೊತೆಗೆ ಮದ್ದೂರು ವಿಧಾನಸಭಾ ಕ್ಷೇತ್ರದಾದ್ಯಂತ ಜನಸಂಪರ್ಕ ಸಭೆ ನಡೆಸಿ, ಕಂದಾಯ ಇಲಾಖೆ ಹಾಗೂ ಅಲ್ಲಿನ ಅಧಿಕಾರಿಗಳ ಮೂಲಕ ಜನರ ಸಮಸ್ಯೆ ಪರಿಹರಿಸಲು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವೆಂಬಂತೆ ಸಚಿವರು ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.