ಮಂಡ್ಯ ಜಿಲ್ಲೆಯ ಮದ್ದೂರು, ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕೆಶಿಪ್-3 ಯೋಜನೆಯಡಿ ಒಟ್ಟು 77 ಕಿ.ಮೀ. ಹೆದ್ದಾರಿ ಹಾದುಹೋಗಿದ್ದು, ಈ ರಸ್ತೆ ನಿರ್ಮಾಣಕ್ಕೆ 198 ಎಕರೆ ಖಾಸಗಿ ಜಮೀನು ಅವಶ್ಯವಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಶಿಪ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೇರ ಖರೀದಿಯಡಿ 121 ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ, ಬಾಕಿ ಉಳಿದಿರುವ ಸರ್ವೆ ನಂಬರ್ ಜಮೀನುಗಳ ವಶಕ್ಕೆ ರಾಜ್ಯ ಹೆದ್ದಾರಿ ಕಾಯ್ದೆ-1964 ರ, ಕಲಂ 19 ರನ್ವಯ ಒಟ್ಟು 59 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅವಾರ್ಡ್ ಅನುಮೋದನೆಯಾಗಿದ್ದು, ಎರಡೂ ಉಪವಿಭಾಗಗಳ ವ್ಯಾಪ್ತಿಯಿಂದ ನೋಟೀಸ್ ಜಾರಿಗೊಳಿಸಲಾಗಿರುತ್ತದೆ ಎಂದರು.
ಪಾಂಡವಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ದರ ನಿರ್ಧರಣೆ ಅನುಮೋದನೆಯಾಗಿದ್ದು, ಅವಾರ್ಡ್ ಪ್ರಸ್ತಾವನೆ ಸಲ್ಲಿಸಲು ಬಾಕಿಯಿದೆ, ದರ ನಿರ್ಧರಣೆ ಪ್ರಸ್ತಾವನೆಯನ್ನು ಕೆಶಿಪ್, ವಿಶೇಷ ಜಿಲ್ಲಾಧಿಕಾರಿಗಳು ಬೆಂಗಳೂರು ಅವರಿಗೆ ಕಳುಹಿಸಲಾಗಿದೆ ಎಂದರು.
ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು ಮತ್ತು ಮುಖ್ಯಾಧಿಕಾರಿಗಳಿಂದ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ಭೂಪರಿಹಾರವನ್ನು ಪಾವತಿ ಮಾಡಬೇಕೆಂದರು.
ಅಲ್ಲದೇ ಕೈಬಿಟ್ಟ ಪ್ರಕರಣಗಳಲ್ಲಿ ಸಂಬಂಧಿಸಿದ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ತುರ್ತಾಗಿ ಜೆ.ಎಂ.ಸಿ (ಜಂಟಿ ಸರ್ವೆ)ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಐಶ್ವರ್ಯ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಸ್ವಾಮಿಗೌಡ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.