ನನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ಆತ್ಮಾಭಿಮಾನ ಕಳೆದುಕೊಂಡು ಜೀವನವಾಗಲೀ, ರಾಜಕೀಯ ವಾಗಲೀ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದರು.
ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪ ಹೋಬಳಿಯಲ್ಲಿ ನಡೆದ ಎಲ್ಆರ್ ಎಸ್ ಸ್ವಾಭಿಮಾನಿ ಸಮಾವೇಶಕ್ಕೆ ಆಗಮಿಸಿದ ಕೊಪ್ಪ ಹೋಬಳಿಯ ಜನರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಮಾಧ್ಯಮಗಳ ಮೂಲಕ ತಿಳಿಸುತ್ತೇನೆ. ಕೊಪ್ಪ ರಾಜಕೀಯ ರಂಗ ನನಗೆ ಕಬ್ಬಿಣದ ಕಡಲೆಯಾಗಿತ್ತು. ಆದರೇ ಇಂದು ಕೊಪ್ಪದಲ್ಲಿ ನನಗೆ ಒಳ್ಳೆಯ ಗೌರವ ಸಿಕ್ಕಿದೆ. ನನ್ನ ನಿರೀಕ್ಷೆಗೂ ಮೀರಿದ ಜನ ಎಲ್ ಆರ್ ಎಸ್ ಸ್ವಾಭಿಮಾನ ಸಮಾವೇಶಕ್ಕೆ ಆಗಮಿಸಿದ್ದು ನನಗೆ ರಾಜಕೀಯದಲ್ಲಿ ಮತ್ತಷ್ಟು ಬಲ ತಂದಿದೆ ಎಂದರು.
ಸ್ಪರ್ಧಿಸುವುದು ಶತಸಿದ್ಧ
ಕೊಪ್ಪ ಸಮಾವೇಶದ ನಂತರ ನನ್ನ ವೈಯಕ್ತಿಕ ಕೆಲಸಗಳ ನಿಮಿತ್ತ ಕ್ಷೇತ್ರದತ್ತ ಬರದೇ ಇದ್ದ ಕಾರಣ ಶಿವರಾಮೇಗೌಡ ಯಾವುದೋ ಪಕ್ಷದವರ ಜೊತೆಗೆ ಹೊಂದಾಣಿಕೆ ಆಗಿದ್ದಾರೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ನವರು ಮಾಡುತ್ತಿರುವ ಅಪಪ್ರಚಾರ, ಸುಳ್ಳು ವದಂತಿಗಳಿಗೆ ಸ್ವಷ್ಟನೆ ನೀಡಿದ ಅವರು, ನಾನು 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನನಗೆ ಅಡ್ಜಸ್ಟಮೆಂಟ್ ರಾಜಕೀಯ ಮಾಡಲು ನನಗೆ ಬರುವುದಿಲ್ಲ. ಅವರೆಲ್ಲೋ ಅಂತಹ ಅಡ್ಜಸ್ಟಮೆಂಟ್ ರಾಜಕೀಯ ಮಾಡಬಹುದೇನೋ, ನಾನೆಂದು ಕೂಡ ಆತ್ಮಾಭಿಮಾನ ಕಳೆದುಕೊಂಡು ಜೀವನ ಹಾಗೂ ರಾಜಕೀಯ ಮಾಡುವ ಅನಿವಾರ್ಯತೆ ನನಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸ್ವಾಭಿಮಾನದ ವಿಚಾರದಲ್ಲಿ ಅವರನ್ನು ನೋಡಿ ಕಲಿಯುವ ಅವಶ್ಯಕತೆ ನನಿಗಿಲ್ಲ.ಹಿಂದೆ ನಡೆದಿದ್ದ ಸಮಾವೇಶದಲ್ಲಿ ನಾನು ಚಲುವರಾಯಸ್ವಾಮಿಗೂ ಬಾಕಿದಾರನಲ್ಲ, ಈ ಮಗನಿಗೂ ಬಾಕಿದಾರನಲ್ಲ ಎಂದು ಹೇಳಿದ್ದೇನೆ, ನನಗೆ ನಲವತ್ತು ವರ್ಷದ ರಾಜಕೀಯ ಅನುಭವವಿದೆ ಆದರೆ ಅವಕಾಶಗಳು ಸಿಕ್ಕಿಲ್ಲ. ಆದರೆ ಈ ಬಾರಿ ಗೆಲುವು ನನ್ನದೇ, ಕೊಪ್ಪ ಹಾಗೂ ಕದಬಹಳ್ಳಿ ಸಮಾವೇಶ ಮುಗಿದಿದೆ. ಮುಂದಿನ ದಿನಗಳಲ್ಲಿ ಉಳಿದ ಹೋಬಳಿಗಳಲ್ಲಿ ಸಮಾವೇಶ ಮಾಡುವುದಾಗಿ ತಿಳಿಸಿದರು.
ಎಲ್ಲ ಪಕ್ಷಗಳಿಂದಲೂ ನನಗೆ ಅವಕಾಶ ಕೊಡುತ್ತೇವೆ ಬನ್ನಿ ಎಂಬ ಕರೆಗಳು ಬಂದಿದೆ. ನನಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವುದಾದರೆ ನಾನು ನನ್ನ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಮಾತುಕತೆ ನೆಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಅಭಿವೃದ್ಧಿಯ ಹರಿಕಾರ ಶಾಸಕ ಸುರೇಶ್ ಗೌಡ ಈಗ ತಾಲೂಕಿನಲ್ಲಿ ಎಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನ ನೀವೇ ನೋಡುತ್ತಿದ್ದೀರಾ, ಭ್ರಷ್ಟಾಚಾರ ರುದ್ರ ತಾಂಡವ ವಾಡುತ್ತಿದೆ, ಒಂದು ಎಕರೆ ಜಮೀನು ಮಂಜೂರು ಮಾಡಿಕೊಡಲು ಒಂದೂವರೆ ಲಕ್ಷ ನಿಗದಿ ಮಾಡಿದ್ದಾರಂತೆ. ಹೀಗಾದರೆ ರೈತರ ಪರಿಸ್ಥಿತಿ ಏನಾಗಬೇಕು, ನನ್ನ ಕಾಲದಲ್ಲಿ ಇಪ್ಪತೆಂಟು ಸಾವಿರ ಎಕರೆ ಭೂಮಿಯನ್ನ ಮಂಜೂರು ಮಾಡಿಕೊಟ್ಟಿದ್ದೇನೆ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಹಲವಾರು ಸೇತುವೆ ಸಂಪರ್ಕ ಕಲ್ಪಿಸಿಕೊಟ್ಟಿದ್ದೇನೆ, ಭ್ರಷ್ಟಾಚಾರ ಮುಕ್ತ ಆಡಳಿತವನ್ನ ನಾವು ಮಾಡಿದ್ದೇವೆ. ಈ ಬಾರಿ ನನ್ನ ಕೊನೆಯ ಚುನಾವಣೆ, ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕಲ್ಪಿಸಿ ಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಸುದ್ದಿ ಗೋಷ್ಠಿಯಲ್ಲಿ ಕ್ರಷರ್ ನಾಗರಾಜು, ಮಂಜೇಗೌಡ,ಟಿ.ಕೆ. ರಾಮೇಗೌಡ, ರಮೇಶ್, ರವಿ ಮಯ್ತಿತರರು ಉಪಸ್ಥಿತರಿದ್ದರು.