Monday, September 16, 2024

ಪ್ರಾಯೋಗಿಕ ಆವೃತ್ತಿ

ಹವಾಮಾನ ವೈಪರೀತ್ಯ| ತೆಲಂಗಾಣದಲ್ಲಿ ಒಂದೇ ದಿನದಲ್ಲಿ ಧರೆಗುರುಳಿದ ಲಕ್ಷ ಮರಗಳು!

ಅಪರೂಪದ ಹವಾಮಾನ ವೈಪರೀತ್ಯದಿಂದಾಗಿ ತೆಲಂಗಾಣದ ಮೇಡಾರಂ-ಪಸಾರಾ ಮತ್ತು ಮೇಡಾರಂ-ತಡ್ವೈ ರಸ್ತೆಗಳ ನಡುವಿನ ಎತುರ್ನಗರಂ ವನ್ಯಜೀವಿ ಅಭಯಾರಣ್ಯದ 200 ಹೆಕ್ಟೇರ್‌ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಧರೆಗುರಿಳಿವೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಪ್ರಾಣಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಎತುರ್ನಗರಂ ವನ್ಯಜೀವಿ ಅಭಯಾರಣ್ಯವು 81,200 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿದ್ದು, ಹೆಚ್ಚಾಗಿ ಚಿರತೆಗಳ ಆವಾಸ ಸ್ಥಾನವಾಗಿದೆ. ಆಗಸ್ಟ್‌ 31ರಂದು ಸಂಭವಿಸಿದ ಘಟನೆಯಲ್ಲಿ ಲಕ್ಷಕ್ಕೂ ಅಧಿಕ ಮರಗಳು ನಾಶವಾಗಿದ್ದು, ಪ್ರಾಣಿಗಳ ವಾಸಕ್ಕೆ ತೊಂದರೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ವಿನಾಶದ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿರುವ ತೆಲಂಗಾಣ ಪಂಚಾಯತ್ ರಾಜ್ ಸಚಿವೆ ದನ್ಸಾರಿ ಅನಸೂಯಾ ಅಲಿಯಾಸ್ ಸೀತಕ್ಕ, “ಸುಮಾರು ಒಂದು ಲಕ್ಷ ಮರಗಳು ಉರುಳುತ್ತವೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಪ್ರಕೃತಿಕ ವಿಕೋಪಕ್ಕೆ ಬೇವು, ಆಲ, ಅರಳಿ ಮರಗಳು ಸೇರಿದಂತೆ ಹಲವಾರು ಜಾತಿಯ ಮರಗಳು ನಾಶವಾಗಿವೆ. ಕೆಲವು ಅಪರೂಪದ ಔಷಧೀಯ ಸಸ್ಯಗಳಿಗೂ ಹಾನಿಯಾಗಿದೆ” ಎಂದು ಹೇಳಿದ್ದಾರೆ.

ತಜ್ಞರು ಕೂಡ ಇಂತಹ ಘಟನೆಯನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಹೇಳಿದ್ದಾರೆ. ಪ್ರಿನ್ಸಿಪಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ಸ್ (ಎಫ್‌ಎಸಿ) ಎಲುಸಿಂಗ್ ಮೇರು ಅವರು “ಇದು ತೆಲಂಗಾಣದಂತಹ ರಾಜ್ಯದಲ್ಲಿ ಬಹಳ ಅಪರೂಪದ ಘಟನೆ. ಇದು ಬಹುಶಃ ಹೆಚ್ಚಿನ ಗಾಳಿ ಮತ್ತು ಮೇಘಸ್ಫೋಟದಿಂದ ಸಂಭವಿಸಿದೆ. ಅರಣ್ಯ ಇಲಾಖೆಯ ವಿಶೇಷ ತಂಡಗಳು ಈ ಹವಾಮಾನ ವೈಪರೀತ್ಯದಿಂದ ಉಂಟಾದ ಹಾನಿಯ ಪ್ರಮಾಣವನ್ನು ನಿರ್ಣಯಿಸುತ್ತಿವೆ” ಎಂದು ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಕೂಡ ಆಗಸ್ಟ್ 31ರಂದು ಸಂಭವಿಸಿದ ಸುಂಟರಗಾಳಿಯಿಂದ ಮರಗಳು ನಾಶವಾಗಿವೆ ಎಂದು ಹೇಳಿದ್ದಾರೆ.

ನರಸಿಂಹ ರೆಡ್ಡಿ ಸೇರಿಸಲಾಗಿದೆ: “ಭಾರೀ ಗಾಳಿ, ಮೆಳೆಯಿಂದಾಗಿ ಮರಗಳು ಉರುಳಿ ಬಿದ್ದಿರುವ ಸಾಧ್ಯತೆ ಇದೆ. ಮರಗಳು ಬಿದ್ದಿರುವುದನ್ನು ನೋಡಿದರೆ, ಗಾಳಿಯು ಗಂಟೆಗೆ 90 ಕಿ.ಮೀಗಿಂತ ಹೆಚ್ಚು ವೇಗವಾಗಿ ಬೀಸಿರುವ ಸಾಧ್ಯತೆ ಇದೆ. ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಉರುಳಿ ಬಿದ್ದ ಬಹುತೇಕ ಮರಗಳು ತೋಟಗಾರಿಕೆಯ ಭಾಗವಾಗಿವೆ. ಅವುಗಳ 10 ವರ್ಷಗಳಷ್ಟು ಹಿಂದೆ ನೆಟ್ಟಿರುವ ಸಾಧ್ಯತೆಗಳಿವೆ. ಕಾಡಿನ ಮರಗಳು 50 ವರ್ಷಕ್ಕೂ ಹಳೆಯವು. ಅವು ಆಳವಾಗಿ ಬೇರುಬಿಟ್ಟಿರುತ್ತವೆ. ತೀವ್ರವಾದ ಗಾಳಿಯನ್ನು ತಡೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುತ್ತವೆ” ಎಂದು ಪರಿಸರವಾದಿ ದೋಂತಿ ನರಸಿಂಹ ರೆಡ್ಡಿ ಹೇಳಿದ್ದಾರೆ.

ಸೀತಕ್ಕ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ಆರ್‌ಎಂ ಡೊಬ್ರಿಯಾಲ್, ಕಾಳೇಶ್ವರಂ ಮುಖ್ಯ ಸಂರಕ್ಷಣಾಧಿಕಾರಿ ಎಂ ಪ್ರಭಾಕರ್ ಮತ್ತು ಮುಳುಗು ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ರಾಹುಲ್ ಜಾಧವ್ ಯಾದವ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಮರಗಳ ಹಾನಿ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಈ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರ ಗಮನಕ್ಕೆ ತರುವಂತೆ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ ಮತ್ತು ಬಂಡಿ ಸಂಜಯ್ ಅವರಿಗೆ ಸೀತಕ್ಕ ಮನವಿ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಅರಣ್ಯ ಪ್ರದೇಶದಲ್ಲಿ ಮರಗಳ ನಷ್ಟವನ್ನು ಲೆಕ್ಕ ಹಾಕುತ್ತಿದ್ದಾರೆ ಎಂದು ಸೀತಕ್ಕ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!