ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಬಿ ಆರ್ ಸಿ ಸಂಪನ್ಮೂಲ ವ್ಯಕ್ತಿ ಡಿ.ಪಿ ಗಿರೀಶ್ ಅಭಿಪ್ರಾಯ ಪಟ್ಟರು.
ನಾಗಮಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ಕೆಪಿಎಸ್ಸಿ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಕೇಂದ್ರ ಸಂಪನ್ಮೂಲ ನಾಗಮಂಗಲ ಹಾಗೂ ದೇವಲಾಪುರ ಸಿ ಆರ್ ಸಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು.
ವ್ಯಾಸಂಗದ ಅವಧಿಯಲ್ಲಿ ಸಾಂಸ್ಕೃತಿಕ ಪ್ರಜ್ಞೆಗಳು ಮಕ್ಕಳಲ್ಲಿಯೇ ಬೆಳೆಯುತ್ತಿರುತ್ತದೆ. ಕೇವಲ ಪಠ್ಯವಲ್ಲದೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರಬೇಕು.ಮಕ್ಕಳಲ್ಲಿಯೇ ಪ್ರತಿಭೆಗಳು ಅಡಕವಾಗಿದ್ದು, ಅಂತಹ ಪ್ರತಿಭೆಗಳಿಗೆ ಇಂತಹ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆಯಾಗಿ ತಮ್ಮ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ರಂಗದಲ್ಲಿ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಂಜಮಣಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ. ಜೆ. ಕುಮಾರ್ ಹಾಗೂ ಸಿ ಆರ್ ಸಿ ಸಂಯೋಜಕರುಗಳಾದ ಉಗ್ರೇಗೌಡ, ಶಿವಸ್ವಾಮಿ, ವಿರೂಪಾಕ್ಷ ಸುರೇಶ್,ಶಿಕ್ಷಕಿಯರಾದ ಮಮತ, ಮಂಜುಳಾ,ಮುಖ್ಯ ಶಿಕ್ಷಕ ನಾಗೇಗೌಡ ಮತ್ತಿತರರಿದ್ದರು.