ಚಿರತೆ ಸೆರೆಯಾಗದೆ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ಕೆ.ಆರ್.ಎಸ್.ಬೃಂದಾವನಕ್ಕೆ ಪ್ರವಾಸಿಗರು ಬರದಂತೆ ನಿರ್ಬಂಧ ಮುಂದುವರಿಸಲಾಗಿದೆ.
ಕಳೆದ ಹಲವು ದಿನಗಳಿಂದ ಬೋನಿಟ್ಟುಕೊಂಡು, ಚಿರತೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದರೂ ಚಿರತೆ ಸಿಕ್ಕಿಲ್ಲ.ಇದರಿಂದಾಗಿ ನೀರಾವರಿ ಇಲಾಖೆ ನಿರ್ಬಂಧ ಮುಂದುವರೆಸಲಾಗಿದೆ. ನಿತ್ಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ವಿಶ್ವಪ್ರಸಿದ್ಧ ಬೃಂದಾವನ ಈಗ ಖಾಲಿ ಖಾಲಿಯಾಗಿ ಬಿಕೋ ಎನ್ನುವಂತಾಗಿದೆ.
ಬೃಂದಾವನ ವೀಕ್ಷಿಸಲು ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ದಿನನಿತ್ಯ ಬರುತ್ತಾರೆ. ಕೋವಿಡ್ ಸಂದರ್ಭ ಹಾಗೂ ಕಾವೇರಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಬೃಂದಾವನ ಬಾಗಿಲು ಮುಚ್ಚಲಾಗಿತ್ತು. ಅದಾದ ನಂತರ ಚಿರತೆ ಹಾವಳಿಯಿಂದಾಗಿ ಇಷ್ಟು ದಿನ ಬೃಂದಾವನ ಮುಚ್ಚಿರೋದು ಇದೇ ಮೊದಲು.