ಪ್ರಸ್ತುತ ದಿನಗಳಲ್ಲಿ ಯುವಕರಿಗಿಂತ , ಹಿರಿಯ ನಾಗರೀಕರಲ್ಲೇ ಜೀವನೋತ್ಸಾಹ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹಿರಿಯ ನಾಗರೀಕರ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ಆರ್.ರೋಹಿತ್ ತಿಳಿಸಿದರು.
ಮಂಡ್ಯ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಿಶ್ವಹಿರಿಯ ನಾಗರೀಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಜಿಲ್ಲಾಮಟ್ಟದ ಹಿರಿಯ ನಾಗರೀಕರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯ ನಾಗರೀಕರು ಎಂದ ಕೂಡಲೇ ನಮಗೆಲ್ಲ ಒಂದು ರೀತಿ ಆಗುತ್ತದೆ. ಅವರಿಗೆ ಮೊದಲಿನಂತೆ ಬದುಕಲು ಕಷ್ಟ ಎಂಬ ಭಾವನೆ ಮೂಡುತ್ತದೆ. ಆದರೆ, ಅವರಲ್ಲಿಯೂ ಬದುಕುವ ಉತ್ಸಾಹವಿದೆ. ಯುವಕರಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಮನಸ್ಸಿರುತ್ತದೆ. ಹಾಗಾಗಿ ಅವರ ಉತ್ಸಾಹಕ್ಕೆ ನಾವು ತಣ್ಣೀರೆರಚದೆ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ಪ್ರತಿಯೊಬ್ಬ ಯುವಕರು ಸಹ ಭವಿಷ್ಯದ ದಿನಗಳಲ್ಲಿ ಹಿರಿಯ ನಾಗರೀಕರಾಗುವುದು ಖಚಿತ ಎಂಬುದನ್ನು ಅರಿತು, ಹಿರಿಯರನ್ನು ಗೌರವಿಸಬೇಕು. ಹಿರಿಯರು ಯಾವುದೇ ಕೆಲಸಕ್ಕೆ ಬಾರದವರು ಎಂಬ ಮನೋಭಾವನ್ನು ಬಿಡಬೇಕು. ಹಿರಿಯರು ಚಟುವಟಿಯಲ್ಲಿರುವಂತೆ ನೋಡಿಕೊಳ್ಳಬೇಕು. ಹೀಗಾದಾಗ ಮಾತ್ರ ಹಿರಿಯ ನಾಗರೀಕರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಹಿರಿಯ ಅಧಿಕಾರಿಗಳಾದ ಹೆಚ್.ಕೆ.ರೇವಣ್ಣೇಶ್, ಹೆಚ್.ಎಂ.ಬಸವರಾಜು, ಜೆ.ಎಸ್.ಕೃಷ್ಣ, ಮಹದೇವಪ್ಪ, ವಸಂತ ಲಕ್ಷ್ಮಿ ಪುಟ್ಟಸ್ವಾಮಿ, ಸೂನಗಹಳ್ಳಿ ಪುಟ್ಟಸ್ವಾಮಿ, ಪ್ರಭಾಕರ್, ಪೂರ್ಣಿಮಾ, ನಟರಾಜು, ಶೀಲ ಅರಕೆರೆ ಹಾಜರಿದ್ದರು.