ಮಳವಳ್ಳಿ ತಾಲೂಕು ಹಾಡ್ಲಿ ಸರ್ಕಲ್ನಲ್ಲಿರುವ ಮದ್ಯದಂಗಡಿಯನ್ನು ರಾಷ್ಟ್ರೀಯ ಹೆದ್ದಾರಿ ಬದಿಯ ಜನವಸತಿ, ಆಸ್ಪತ್ರೆ, ಶಾಲೆ ಇರುವ ಪ್ರದೇಶಕ್ಕೆ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಅಬಕಾರಿ ಇಲಾಖೆ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು , ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಕ್ಕೆ ವಿನಾಯಕ ವೈನ್ಸ್ ಸ್ಥಳಾಂತರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಸ್ಥಳಾಂತರ ಮಾಡಲು ಉದ್ದೇಶಿಸಿರುವ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿದ್ದು ಮಹಿಳೆಯರು ಮಕ್ಕಳು ಹೆಚ್ಚಿನದಾಗಿ ಓಡಾಡುತ್ತಾರೆ, ಪಶು ಚಿಕಿತ್ಸಾಲಯ, ಅರುಣೋದಯ ವಿದ್ಯಾ ಸಂಸ್ಥೆ, ವಾಸದ ಮನೆಗಳು ಇದ್ದು ಅಷ್ಟೇ ಅಲ್ಲದೆ 50 ಅಡಿ ದೂರದಲ್ಲಿ ಕೆಇಬಿ ಸ್ಟೇಷನ್ ಇದೆ ಹಾಗಾಗಿ ಯಾವುದೇ ಕಾರಣಕ್ಕೂ ಈ ಪ್ರದೇಶಕ್ಕೆ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ಅಬಕಾರಿ ಇಲಾಖೆ ಉಪ ಅಧೀಕ್ಷಕಿ ಮಹದೇವಿಬಾಯಿ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಆರ್. ಕೃಷ್ಣ, ಮಲ್ಲಿಕಾರ್ಜುನಸ್ವಾಮಿ, ಚಿಕ್ಕತಾಯಮ್ಮ, ಸಾವಿತ್ರಮ್ಮ, ಸುಶೀಲಮ್ಮ, ಕಾಮಾಕ್ಷಮ್ಮ, ಸಾಕಮ್ಮ. ಸಮೀದಾ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.