ಮಳವಳ್ಳಿ ಪಟ್ಟಣದ ಶ್ರೀರಾಮಾಂಜನೇಯ ಸೇವಾ ಸಮಿತಿ ವತಿಯಿಂದ ಆಂಜನೇಯ ದೇವಸ್ಥಾನದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾಮಗಾರಿಯನ್ನು ಪುರಸಭೆ ಅಧಿಕಾರಿಗಳು ನಿಲ್ಲಿಸಿ, ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಳವಳ್ಳಿ ಪಟ್ಟಣದ ವರಕೋಟೆ ನಿವಾಸಿಗಳು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಬೋರೇಗೌಡ ಮಾತನಾಡಿ, ರಾಮ ಮಂದಿರ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದ ಮುಜರಾಯಿ ಇಲಾಖೆಗೆ ಸೇರಿಲ್ಲ ಎಂದು ತಾಲೂಕು ಕಚೇರಿಯಲ್ಲಿ ದಾಖಲಾತಿ ನೀಡಿದ್ದಾರೆ, ಜೊತೆಗೆ ಪುರಸಭೆಯಿಂದಲೂ ಈ -ಸ್ವತ್ತು ಮಾಡಿಕೊಡಲಾಗಿದೆ. ಶ್ರೀ ರಾಮಾಂಜನೇಯ ಸೇವಾ ಸಮಿತಿ ವತಿಯಿಂದ ನಡೆಯುತ್ತಿರುವ ಕಾಮಗಾರಿಯನ್ನು ನಿಲ್ಲಿಸಬೇಕೆಂದು ನ್ಯಾಯಾಲಯಕ್ಕೆ ಕೆಲವರ ಅರ್ಜಿ ಹಾಕಿದರು. ಆದರೂ ಪುರಸಭೆ ಅಧಿಕಾರಿಗಳು ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿಯ ಹತ್ತಿರ ಬಂದು ಕೆಲಸ ನಿಲ್ಲಿಸುವಂತೆ ತಿಳಿಸಿ ಕಟ್ಟಡದ ನಿರ್ಮಾಣ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಇದು ಕಾನೂನುಬಾಹಿರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಟ್ರಸ್ಟ್ ಅಧ್ಯಕ್ಷ ಸತೀಶ್, ಪುರಸಭೆ ಮಾಜಿ ಉಪಾಧ್ಯಕ್ಷ ಪ್ರಶಾಂತ್, ಚಿಕ್ಕ ಮೊಗ್ಗಣ್ಣ, ಆನಂದ, ನಾಗೇಶ್ ಹಾಗೂ ಚಂದ್ರು ಸೇರಿದಂತೆ ಇತರರು ಹಾಜರಿದ್ದರು.