ನಿವೇಶನ ಹಂಚಿಕೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಒಡೆತನದ ಅಮರಾವತಿ ಹೋಟೆಲ್ ಬಳಿ ಪೊಲೀಸ್ ಗೃಹ ನಿರ್ಮಾಣ ಸಂಘದ ಸದಸ್ಯರು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಿದರು.
ಮಂಡ್ಯದ ಹೊರವಲಯದಲ್ಲಿರುವ ಶ್ರೀನಿವಾಸಪುರ ಗೇಟ್ ಬಳಿ ಇರುವ ಅಮರಾವತಿ ಹೋಟೆಲ್ ಮುಂದೆ ಬೆಳಿಗ್ಗೆ 10 ಗಂಟೆಗೆ ಪೋಲೀಸ್ ಗೃಹ ನಿರ್ಮಾಣ ಸಂಘದ ಸದಸ್ಯರು ಜಮಾವಣೆಗೊಂಡು ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದರು.
ಕಳೆದ 13 ವರ್ಷಗಳ ಹಿಂದೆ ಪೊಲೀಸರಿಗೆ ಲೇಔಟ್ ಮಾಡಿ ಕೊಡುತ್ತೇನೆ ಎಂದು ಹೇಳಿ ನಿವೇಶನ ಹಂಚಿಕೆಯಲ್ಲಿ ವಿಳಂಬ ಮಾಡಿದ್ದಾರೆ.508 ಸದಸ್ಯರು ನಿವೇಶನ ಸಿಗದೆ ಕಂಗಲಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಗೃಹ ನಿರ್ಮಾಣ ಸಂಘದ ಸದಸ್ಯರಿಗೆ ಲೇಔಟ್ ಮಾಡಿ ಸೈಟು ನೀಡುವುದಾಗಿ 13 ವರ್ಷಗಳ ಹಿಂದೆ ಅಮರಾವತಿ ಚಂದ್ರಶೇಖರ್ ಹಣವನ್ನು ಕಟ್ಟಿಸಿಕೊಂಡಿದ್ದರು. ನಮ್ಮ ಗೃಹ ನಿರ್ಮಾಣ ಸಂಘದ ಸದಸ್ಯರು ಇದುವರೆಗೆ 18 ಕೋಟಿ ರೂ.ಹಣವನ್ನು ಕಟ್ಟಿದ್ದರೂ ಅಮರಾವತಿ ಚಂದ್ರಶೇಖರ್ ಸೈಟು ವಿತರಿಸಿಲ್ಲ. ಈ ಬಗ್ಗೆ ಅಗತ್ಯವಾದ ಕಾಗದ ಪತ್ರಗಳನ್ನು ಸಿದ್ಧಪಡಿಸಿಲ್ಲ. ಕಳೆದ 13 ವರ್ಷಗಳಿಂದ ಸೈಟು ಕೊಡುತ್ತೇನೆ ಎಂದು ಸಬೂಬು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಇದುವರೆಗೂ ಸೈಟು ನೀಡಿಲ್ಲ. ಕಳೆದ 15 ದಿನಗಳ ಹಿಂದೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಲೇಔಟ್ ನಲ್ಲಿ ಕಲ್ಲು ಹಾಕಿಸಿ ನಿವೇಶನದ ನಂಬರ್ ಬರೆಸಿ ಹಸ್ತಾಂತರ ಮಾಡುವುದಾಗಿ ಹೇಳಿದ್ದರು.ಆದರೆ ಅದಕ್ಕೆ ಸಂಬಂಧಿಸಿದ ಕಾಗದ ಪತ್ರ ಸಿದ್ಧವಾಗಿಲ್ಲ.ಇನ್ನೂ 9 ಎಕರೆ ಜಮೀನಿನಲ್ಲಿ ಯಾವುದೇ ಕೆಲಸ ನಡೆದಿಲ್ಲ. ಹಾಗಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಪೋಲಿಸ್ ಗೃಹ ನಿರ್ಮಾಣ ಸಂಘದ ಸದಸ್ಯರು ತಿಳಿಸಿದರು.
ಸ್ಥಳಕ್ಕೆ ಎಎಸ್ಪಿ ಭೇಟಿ
ಪೋಲಿಸ್ ಗೃಹ ನಿರ್ಮಾಣ ಸಂಘದ ಸದಸ್ಯರು ರಾತ್ರಿ 7 ಗಂಟೆವರೆಗೂ ಪ್ರತಿಭಟನೆ ಮುಂದುವರಿಸಿ ಹೋಟೆಲ್ ಮುಂದೆ ಶಾಮಿಯಾನ ಹಾಕಲು ಮುಂದಾದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಎಎಸ್ಪಿ ವೇಣುಗೋಪಾಲ್ ಈಗಾಗಲೇ ಅಮರಾವತಿ ಚಂದ್ರಶೇಖರ್ ಅವರಿಗೆ ಎಲ್ಲಾ ಬಗೆಹರಿಸಿ ಸೈಟು ನೀಡುವಂತೆ ಸೂಚಿಸಿದ್ದೇವೆ.ಹೀಗೆ ಪ್ರತಿಭಟನೆ ಮಾಡುವ ಬದಲು ಅವರನ್ನು ಕರೆಸಿ ಮಾತುಕತೆ ಮೂಲಕ ಬಗೆಹರಿಸೋಣ ಎಂದು ಎಸ್ಪಿ ಯತೀಶ್ ಅವರು ತಿಳಿಸಿದ್ದಾರೆ. ಅವರ ಮಾತಿಗೆ ಬೆಲೆಕೊಟ್ಟು ಅಮರಾವತಿ ಚಂದ್ರಶೇಖರ್ ಅವರನ್ನು ಕರೆಸಿ ಮಾತನಾಡೋಣ ಎಂದು ತಿಳಿಸಿದ ನಂತರ ಪೋಲಿಸ್ ಗೃಹ ನಿರ್ಮಾಣ ಸಂಘದ ಸದಸ್ಯರು ಪ್ರತಿಭಟನೆ ಅಂತ್ಯಗೊಳಿಸಿ ಮಾತುಕತೆಗೆ ತೆರಳಿದರು.