ಮದ್ದೂರು ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಟಯೋಟಾ ಕಂಪನಿ ನಿರ್ಮಾಣ ಮಾಡಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಕೆ.ಎಂ.ಉದಯ್ ಅವರ ಭಾವಚಿತ್ರ ಅಳವಡಿಸಿದ ಘಟನೆ ವಿವಾದವಾದ ಬೆನ್ನಲ್ಲೇ ಟಯೋಟಾ ಕಂಪನಿಯ ಅಧಿಕಾರಗಳ ಆದೇಶದ ಮೇರೆಗೆ ಘಟಕಕ್ಕೆ ಬೀಗ ಜಡಿಯಲಾಗಿದೆ.
ಟಯೋಟಾ ಕಿರ್ಲೋಸ್ಕರ್ ಕಂಪನಿಯು ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು 2019-2020 ನೇ ಸಾಲಿನಲ್ಲಿ ನಿರ್ಮಾಣ ಮಾಡಿತ್ತು. ಅದರ ನಿರ್ವಹಣೆಯ ಜವಾಬ್ದಾರಿಯು ಕೂಡ ಕಂಪನಿಯದ್ದೇಯಾಗಿತ್ತು. ಟಯೋಟಾ ಕಂಪನಿಯವರು ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಳೆದ ಜುಲೈ 30ರಂದು ಶಾಸಕ ಕೆ.ಎಂ.ಉದಯ್ ಅವರ ಭಾವಚಿತ್ರ ಅಳವಡಿಸಲಾಗಿತ್ತು. ಈ ಹಿಂದೆ ಶಾಸಕರಾಗಿದ್ದಂತಹ ಡಿ.ಸಿ.ತಮ್ಮಣ್ಣ ಅವರು ಟಯೋಟ ಕಿರ್ಲೋಸ್ಕರ್ ಕಂಪನಿ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿಸಿದ್ದರು ಎನ್ನಲಾಗಿದೆ.
ಟಯೋಟಾ ಕಿರ್ಲೋಸ್ಕರ್ ಕಂಪನಿಯಿಂದ ಅಳವಡಿಸಿದ್ದ ಹೆಸರನ್ನು ಮುಚ್ಚಿ ಶಾಸಕರ ಭಾವಚಿತ್ರವನ್ನು ಹಾಕಿರುವುದನ್ನು ಈ ಕೂಡಲೇ ತೆರವುಗೊಳಿಸುವಂತೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ನಂತರ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಟಯೋಟಾ ಕಂಪನಿಯ ಅಧಿಕಾರಿ ವರ್ಗದವರಿಗೂ ವಿಷಯ ಮುಟ್ಟಿಸಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಟಯೋಟಾ ಕಂಪನಿಯ ಉನ್ನತಾಧಿಕಾರಿಗಳ ಸೂಚನೆಯ ಮೇರೆಗೆ ಕಂಪನಿಯ ಸಿಬ್ಬಂದಿಗಳು ಭಾರತೀನಗರಕ್ಕೆ ಆಗಮಿಸಿ ಶಾಸಕರ ಭಾವಚಿತ್ರ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಜಡಿದು ಹೋಗಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಿಗೆ ಲಭ್ಯವಾಗುತ್ತಿದ್ದ ಶುದ್ಧ ಕುಡಿಯುವ ನೀರಿಗೂ ಕಲ್ಲು ಬಿದ್ದಂತಾಗಿದೆ.