ಲಾರಿ ಚಾಲಕರಿಗೆ ಮತ್ತು ಮಾಲೀಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಅದೇಶ ಹೊರಡಿಸಿರುವ ಭಾರತೀಯ ನ್ಯಾಯ ಸಂಹಿತೆ 2ನೇ 2023ರ ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ಸೆಕ್ಷನ್ 106/1 ಮತ್ತು 106/2ನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಶ್ರೀಲಕ್ಷ್ಮಿನಿಧಿ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಪ್ರತಿಭಟನೆ ನಡೆಸಿದರು.
ಶ್ರೀಲಕ್ಷ್ಮಿ ಲಾರಿ ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಯರಾಮು ಮಾತನಾಡಿ, ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ನಿಯಮದ ಪ್ರಕಾರ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಚಾಲರಿಗೆ 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸಬಹುದು ಎಂಬ ನಿಯಮದಿಂದ ಚಾಲರಿಗೆ ಹಾಗೂ ಮಾಲೀಕರಿಗೆ ಹೆಚ್ಚಿನ ತೊಂದರೆಯಾಗುವುದರಿಂದ ಕೂಡಲೇ ನಿಯಮವನ್ನು ವಾಸಪ್ ಪಡೆಯಬೇಕೆಂದು ಒತ್ತಾಯಿಸಿದರು.
ಕೂಲಿ ಮಾಡಿ ಜೀವನ ಸಾಗಿಸುವ ಚಾಲಕರು ತಮ್ಮ ಜೀವಿತ ಅವಧಿಯಲ್ಲಿ ಲಕ್ಷಾಂತರ ರೂ ಹಣವನ್ನು ಕಂಡಿರುವುದಿಲ್ಲ, ಜೀವನ ಸಾಗಿಸುವುದೇ ಕಷ್ಟಪಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹೊಸದಾಗಿ ಬಂದಿರುವ ಕಾನೂನಿನಿಂದ ಕುಟುಂಬವೇ ಬೀದಿಪಾಲು ಆಗುವ ಸನ್ನಿವೇಶ ಎದುರಾಗುವುದರಿಂದ ಕೂಡಲೇ ಕೇಂದ್ರ ಸರ್ಕಾರ ಅದೇಶವನ್ನು ವಾಪಸ್ ಪಡೆಯಬೇಕು, ಇಲ್ಲದಿದ್ದರೇ ಉಗ್ರ ಪ್ರತಿಭಟನೆಯನ್ನು ಮುಂದುವರಿಸಬೇಕಾಗುತ್ತದೆ ಎಂದರು ಎಚ್ಚರಿಸಿದರು.
ಕೆಲಕಾಲ ಮಳವಳ್ಳಿ ಕೊಳ್ಳೇಗಾಲ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ವೆಂಕಟೇಶ್, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭರತ್ರಾಜ್, ಸಿಐಟಿಯು ಮುಖಂಡ ರಾಮಕೃಷ್ಣ, ಗುರುಸ್ವಾಮಿ, ಸಂಘದ ಪದಾಧಿಕಾರಿಗಳಾದ ಚೆನ್ನಪ್ಪ, ಚಂದ್ರಣ್ಣ, ದೇವರಾಜು, ನಾಗರಾಜು, ಮಧು ಸೇರಿದಂತೆ ಇತರರು ಇದ್ದರು.