ಮಂಡ್ಯ ವಿಧಾನಸಭೆ ಚುನಾವಣಾ ಕಣಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಬೇಕೆಂದು ಒತ್ತಾಯಿಸಿದ ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ.ಚಿಕ್ಕಣ್ಣ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಎಂ.ಶ್ರೀನಿವಾಸ್ ಹೊರತುಪಡಿಸಿ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಬಂಡಾಯ ಸ್ಪರ್ಧೆ ಖಚಿತ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ನನಗೆ 32 ವರ್ಷಗಳ ಹಿರಿತನವಿದೆ, ಒಂದು ವೇಳೆ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಎಂ.ಶ್ರೀನಿವಾಸ್ ಅವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷಕ್ಕಾಗಿಯೇ ದುಡಿಯುತ್ತೇನೆ, ಅವರನ್ನು ಹೊರತುಪಡಿಸಿ ಅನ್ಯರಿಗೆ ಟಿಕೆಟ್ ನೀಡುವ ಸಂದರ್ಭ ಬಂದರೆ ಪಕ್ಷದ ವರಿಷ್ಠರು ನನ್ನ ಹಿರಿತನವನ್ನು ಪರಿಗಣಿಸಿ ನನಗೆ ಟಿಕೆಟ್ ನೀಡಬೇಕೆಂದು ಒತ್ತಾಯಿದ ಅವರು, ಇತ್ತೀಚೆಗೆ ಪಕ್ಷಕ್ಕೆ ಬಂದ ಬೇರೆಯವರಿಗೆ ಟಿಕೆಟ್ ನೀಡಿದ್ದೆ ಆದರೆ ನಾನು ಬಂಡಾಯ ಸ್ಪರ್ಧೆ ಮಾಡುವುದು ನಿಶ್ಚಿತ ಎಂದರು.
ಮಂಡ್ಯ ಕ್ಷೇತ್ರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಬಂದರೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಲು ಸಿದ್ದರಿದ್ದೇವೆ, ಅವರು ಬರುವುದರಿಂದ ಜಿಲ್ಲೆಯಲ್ಲಿ ನಾಲ್ಕೈದು ಕ್ಷೇತ್ರಗಳನ್ನು ಪಕ್ಷವು ಗೆಲ್ಲಲಿದೆ ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಜೆಡಿಎಸ್ ಸೋಲಲು ಇಲ್ಲಿನ ಜಿಲ್ಲಾಧ್ಯಕ್ಷ ಸೇರಿದಂತೆ ಜಿಲ್ಲಾ ಮುಖಂಡರೇ ಕಾರಣರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಅಪ್ಪಾಜಿಗೌಡ ಸೋಲಲು ಜಿಲ್ಲಾ ನಾಯಕರ ನಿರ್ಲಕ್ಷ್ಯವೇ ಕಾರಣವಾಗಿದೆ. ಅಲ್ಲದೇ ಈ ಚುನಾವಣಾ ಸಂದರ್ಭದಲ್ಲಿ ಪಕ್ಷವನ್ನು ಬಿಡುತ್ತಿರುವ ಸ್ಥಳೀಯ ಮುಖಂಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಜೆಡಿಎಸ್ ಜಿಲ್ಲಾಧ್ಯಕ್ಷ ಸೇರಿದಂತೆ ಎಲ್ಲಾ ನಾಯಕರು ವಿಫಲರಾಗಿದ್ದಾರೆಂದು ದೂರಿದರು.
ಈ ಹಿಂದೆ ಟಿಕೆಟ್ ಆಕಾಂಕ್ಷಿಗಳನ್ನು ಕರೆದು ಮಾತನಾಡುವ ಪರಿಪಾಠ ಜಿಲ್ಲೆಯಲ್ಲಿದ್ದು, ಆದರೆ ಈಗ ಆ ಸಂಪ್ರದಾಯವನ್ನು ಮುರಿದು ಕೆಲವೇ ಕೆಲವೇ ಅಕಾಂಕ್ಷಿಗಳು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದಾರೆ ಇದು ಖಂಡನೀಯ. ಪಕ್ಷದ ಹಿರಿತನ ಹೊಂದಿರುವ ನನ್ನನ್ನು ಪರಿಗಣಿಸಬೇಕಿತ್ತು ಕಿಡಿಕಾರಿದರು.