ಕನ್ನಡದ ಮೊದಲ ವಚನಕಾರ ಶಿವನೊಡನೆ ಹಂಪಲಿ ಕುಡಿದವ, ಘನ ಶಿವಶರಣ ಶ್ರೀಮಾದಾರ ಚನ್ನಯ್ಯನವರ ಹೊಸ್ತಿಲ ಹುಣ್ಣಿಮೆಯ 954ನೇ ವರ್ಷದ ಜಯಂತ್ಯೋತ್ಸವ ಮತ್ತು ಶರಣ ಚನ್ನಯ್ಯನವರ ಕುರಿತು ಉಪನ್ಯಾಸ ಕಾರ್ಯಕ್ರಮ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ, ಕೃತಿ ಬಿಡುಗಡೆ ಕಾರ್ಯಕ್ರಮ ಡಿ.26ರಂದು ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಾಹಿತಿ ಮ.ಸಿ. ನಾರಾಯಣ ಅವರ ಅಡ್ಡೆ, ಆತ್ಮಚರಿತ್ರೆ ಮತ್ತು ಮಾನವೀಯತೆಯ ಹರಿಕಾರರು ಚಿತ್ರಕಥೆ ಬಿಡುಗಡೆ, ಮಂಡ್ಯ ಜಿಲ್ಲಾ ಮಟ್ಟದ ಮಾದಾರ ಚನ್ನಯ್ಯನವರ ವಚನ ಗಾಯನ ಸ್ಪರ್ಧೆ ನಡೆಯಲಿದೆ ಎಂದರು.
ಗಾಯನ ಸ್ಪರ್ಧೆಗೆ ಭಾಗವಹಿಸುವವರು 100 ರೂ.ಗಳ ಪ್ರವೇಶ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಸ್ಫರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ ಬಹುಮಾನವಾಗಿ 2 ಸಾವಿರ ರೂ.ಗಳನ್ನು ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಹೇಳಿದರು.
ಸ್ಪರ್ಧಿಗಳಿಗೆ ಶ್ರೀ ಚನ್ನಯ್ಯನವರ 12 ವಚನಗಳ ಪ್ರತಿಗಳು ನಮ್ಮಲ್ಲಿ ದೊರೆಯುತ್ತವೆ. 10 ವರ್ಷ ಮೇಲ್ಪಟ್ಟ ಸ್ಪರ್ಧಿಗಳು ಮಾತ್ರ ಭಾಗವಹಿಸಬಹುದು. ಸ್ಪರ್ಧಿಗಳು ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ಡಿ. 20ರೊಳಗೆ ಮ.ಸಿ. ನಾರಾಯಣ, ಅಧ್ಯಕ್ಷರು, ವಿ.ಮಾ.ವಿ.ವೇ., ಮಳವಳ್ಳಿ, ಮೊ. 9448740759, ಮಾಸ್ಟರ್ ಲಿಂಗಣ್ಣ ಬಂಧೂಕರ್, ಮೇಲ್ವಿಚಾರಕರು ಗಾಂಧಿ ಭವನ, ಮಂಡ್ಯ : ಮೊ.9972116444 ಅನ್ನು ಸಂಪರ್ಕಿಸುವಂತೆ ಕೋರಿದರು.
ಗೋಷ್ಠಿಯಲ್ಲಿ ಸಾಹಿತಿ ಮ.ಸಿ. ನಾರಾಯಣ, ನಾಗೇಶ್, ಪೋತೇರ ಮಹದೇವ, ಚನ್ನೇಗೌಡ, ಮಂಜುನಾಥ್ ಉಪಸ್ಥಿತರಿದ್ದರು.