ಶಿಕ್ಷಕರು ಮಾನವೀಯ ಮೌಲ್ಯಗಳನ್ನು ವಿಧ್ಯಾರ್ಥಿಗಳಲ್ಲಿ ಬಿತ್ತುವ ಕೆಲಸ ಮಾಡಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ವಳಗೆರೆಹಳ್ಳಿ ಶಿವರಾಜ್ ತಿಳಿಸಿದರು.
ಮದ್ದೂರಿನ ಎಮ್. ಎಚ್. ಚನ್ನೇಗೌಡ ವಿದ್ಯಾರ್ಥಿ ನಿಲಯ, ಜವಾಹರ್ ಪ್ರೌಢಶಾಲೆ ಕಮಲ ನೆಹರು ಬಾಲಿಕಾ ಪ್ರೌಢಶಾಲೆ ಮತ್ತು ಕಸ್ತೂರಿ ಬಾ ಉನ್ನತ ಪ್ರಾಥಮಿಕ ಪಾಠಶಾಲೆಯ ಪ್ರಸ್ತುತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಾಗೂ ಕನ್ನಡ ಸಂಘದ ಉದ್ಘಾಟನೆ ನೇರವೆರಿಸಿ ಅವರು ಮಾತನಾಡಿದರು.
ಮೌಲ್ಯಯುತ ಶಿಕ್ಷಣ ನೀಡಿದ ಶಿಕ್ಷಕರು ವಿಧ್ಯಾರ್ಥಿಗಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾರೆ ಎಂದ ಅವರು ನಾನು ಜವಾಹರ್ ಪ್ರೌಢಶಾಲೆಯಲ್ಲಿ ಪಡೆದ ಶಿಕ್ಷಣದ ಬುನಾದಿಯಿಂದಾಗಿ ನಾವು ಪದವಿ ಶಿಕ್ಷಣ ಮುಗಿಯುತ್ತಿದಂತೆ ಸರ್ಕಾರ ಕರೆದು ಕೆಲಸ ನೀಡುವಲ್ಲಿ ಸಹಕಾರಿಯಾಯಿತು ಎಂದು ಓದಿದ ಶಾಲೆಯ ಅನುಭವ ಸ್ಮರಿಸಿದರು.
ಜವಾಹರ್ ಪ್ರೌಢಶಾಲೆಯಲ್ಲಿನ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ವೈಭವದ ದಿನಗಳನ್ನು ಸ್ಮರಿಸಿದ ಅವರು ವಾರ್ಷಿಕ ಮುನ್ನೋಟದೊಂದಿಗೆ ಕನ್ನಡ ಸಂಘದ ಚಟುವಟಿಕೆಗಳು ವ್ಯವಸ್ಥಿತವಾಗಿ ಸಾಗಲಿ, ಶಾಲೆಯ ಪಠ್ಯ ಚಟುವಟಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯು ಮಕ್ಕಳು ತೊಡಗಿಸಿಕೊಂಡು ದೈಹಿಕ ಹಾಗೂ ಮನೋವಿಕಾಸ ಹೊಂದಲಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ತೋರಲಿ ಎಂದು ಅವರು ಆಶಿಸಿದರು.
ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ. ಪಿ. ಸ್ವಾಮಿಯವರು ಕನ್ನಡ ಸಂಘದ ಚಟುವಟಿಕೆಗಳು ಮಕ್ಕಳ ಮನೋಲ್ಲಾಸ ಮತ್ತು ಮನೋ ವಿಕಾಸಕ್ಕೆ ಸಹಕಾರಿಯಾಗಲಿವೆ. ಕನ್ನಡ ಸಂಘದ ಚಟುವಟಿಕೆಗೆ ಮತ್ತು ನಾವು ಕಲಿತ ಜವಾಹರ್ ಪ್ರೌಢಶಾಲೆಯ ಅಭಿವೃದ್ಧಿಗೆ ಹಳೆಯ ವಿಧ್ಯಾರ್ಥಿಗಳನ್ನು ಸಂಘಟಿಸಿ ಕೈ ಜೊಡಿಸುವಲ್ಲಿ ವೇದಿಕೆಯಲ್ಲಿನ ಜವಾಹರ್ ಪ್ರೌಢಶಾಲೆಯ ವಿಧ್ಯಾರ್ಥಿಗಳಾದ ಎಲ್ಲಾ ಗಣ್ಯರು ಮುಂದಾಗೋಣ ಎಂದರು.
ಜಲಾನಯನ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಗುರುಮೂರ್ತಿಯವರು ಎಮ್.ಎಚ್. ಚನ್ನೇಗೌಡ ವಿದ್ಯಾ ಸಂಸ್ಥೆಯಲ್ಲಿನ ಕನ್ನಡ ಸಂಘದ ಗತವೈಭವ ಮರಳಿ ಬರಲಿ ಎಂದು ಆಶಿಸಿದರು.
ಡಾ. ವೀರಭದ್ರಪ್ಪ ಮಾತನಾಡಿ, ಕನ್ನಡ ಸಂಘದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಾನು ಜವಾಹರ್ ಪ್ರೌಢ ಶಾಲೆಯನ್ನು ಮೂರು ವರ್ಷಗಳ ಕಾಲ ಪ್ರತಿನಿಧಿಸಿದ್ದನ್ನ ಸ್ಮರಿಸಿ ತಾನು ಓದಿದ ಶಾಲೆಯ ಅಭಿವೃದ್ಧಿ ಚಟುವಟಿಕೆಗೆ ಇಪ್ಪತ್ತೈದು ಸಾವಿರ ರೂ ನೆರವು ನೀಡುವುದಾಗಿ ಘೋಷಿಸಿದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ ಮಾತನಾಡಿ ವಿಧ್ಯಾರ್ಥಿಗಳು ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಸಾಂಸ್ಕೃತಿಕವಾಗಿ ಮುಖ್ಯ ವಾಹಿನಿಗೆ ಬರುವಲ್ಲಿ ಸಹಕಾರಿಯಾಗಲಿದೆ ಎಂದರು.
ಮಾನಸ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿ. ಕೆ. ಜಗದೀಶ್, ನಿವೃತ್ತ ಅಬಿಯಂತರ ಪ್ರಸಾದ್, ಪತ್ರಕರ್ತರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಉಪಸ್ಥಿತರಿದ್ದರು. ಎಮ್. ಎಚ್. ಸಿವಿಎಸ್ ನ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಸ್ವಾಗತಿಸಿದರು. ನಿರ್ದೆಶಕರಾದ ಎಮ್. ಎ. ರಾಮಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಎಲ್ಲಾ ಅತಿಥಿಗಳು ಜವಾಹರ್ ಪ್ರೌಡಶಾಲೆಯ ವಿಧ್ಯಾರ್ಥಿಗಳು ಎಂಬುದು ಕಾರ್ಯಕ್ರಮದ ವಿಶೇಷವಾಗಿತ್ತು.