ಕೆ.ಆರ್.ಪೇಟೆ ಪಟ್ಟಣದ ಪ್ರಕೃತಿ ಮಾತೆ ತೋಟದಮ್ಮನವರ ಹಬ್ಬವನ್ನು ಅಂಬೇಡ್ಕರ್ ನಗರದ ಬಂಧುಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕೆ.ಆರ್.ಪೇಟೆ ಪಟ್ಟಣದ ಸುಭಾಷ್ ನಗರ ಬಡಾವಣೆಯ ತೋಟದಲ್ಲಿರುವ ಬೃಹತ್ ಬನ್ನಿ ಮರದಲ್ಲಿ ಐಕ್ಯವಾಗಿರುವ ತಾಯಿ ತೋಟದಮ್ಮನವರ ಸನ್ನಿಧಾನದಲ್ಲಿ ಗದ್ದುಗೆಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ದಲಿತ ಬಂಧುಗಳು ದೇವಿಗೆ ಹರಕೆಯನ್ನು ಒಪ್ಪಿಸಿದರು. ಸುರಿಯುವ ಬಾರಿ ಮಳೆಯನ್ನು ಲೆಕ್ಕಿಸದೆ ತುಂಬಿಟ್ಟಿನಾರತಿಯ ಮಡೆಗಳನ್ನು ಹೊತ್ತು ಕೆ.ಆರ್.ಪೇಟೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ತೋಟದಮ್ಮನವರ ಹಬ್ಬವನ್ನು ಆಚರಿಸಿದರು.
ಕೆ.ಆರ್.ಪೇಟೆ ಪಟ್ಟಣದ ಅಂಬೇಡ್ಕರ್ ನಗರದ ಮುಖಂಡ, ನಿವೃತ್ತ ಶಿಕ್ಷಕ ಬಾಲಕೃಷ್ಣ ಮಾತನಾಡಿ, ತೋಟದಮ್ಮನವರ ಸನ್ನಿಧಾನಕ್ಕೆ ಬರಲು ಸೂಕ್ತವಾದ ರಸ್ತೆ ಸೌಲಭ್ಯವಿಲ್ಲ, ಕೆ ಆರ್ ಪೇಟೆ ಪುರಸಭೆಯು ದೇವಿಯ ಭಕ್ತಾದಿಗಳು ಸನ್ನಿಧಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರಲು ಅನುಕೂಲವಾಗುವಂತೆ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದರು.
ತೋಟದಮ್ಮನವರ ಹಬ್ಬದ ಮಡೆ ಉತ್ಸವ ಮೆರವಣಿಗೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷೆ ಪುಟ್ಟಗೌರಮ್ಮ ದೊಡ್ಡಯ್ಯ, ಸದಸ್ಯರಾದ ಡಿ.ಪ್ರೇಮ್ಕುಮಾರ್, ಸೌಭಾಗ್ಯ ಉಮೇಶ್, ಗಿರೀಶ್, ಟಿಬೆಟ್ ಮಹೇಶ್, ಯಜಮಾನರಾದ ನಾಗರಾಜು ಶಿವಪ್ರಕಾಶ್, ತೋಟದಮ್ಮ ದೇವಾಲಯದ ಅರ್ಚಕರಾದ ದೊಡ್ಡಯ್ಯ, ಪ್ರವೀಣ್, ಅವಿನಾಶ್, ಸಿಂದಘಟ್ಟರಘು ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.