ನನ್ನನ್ನು ಕೆಲವರು ಪ್ರೀತಿಸುತ್ತಾರೆ, ಕೆಲವರು ವಿರೋಧಿಸುತ್ತಾರೆ. ಆಗಂತ ನಾನು ರಾಜಕಾರಣದಲ್ಲಿ ಧೃತಿಗೆಡುವುದಿಲ್ಲ. ನನ್ನನ್ನು ನಂಬಿರುವಂತಹವರಿಗೆ ದ್ರೋಹ ಬಗೆಯುವುದಿಲ್ಲ. ನನ್ನನ್ನು ಬಿಟ್ಟು ಹೋಗುವವರನ್ನು ದ್ವೇಷಿಸುವುದಿಲ್ಲ, ಇದು ನಮ್ಮ ಕುಟುಂಬದ ರಾಜಕಾರಣ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಅಣ್ಣೂರು ಗ್ರಾಮದ ದೊಡ್ಮನೆ ಚಿಕ್ಕಣ್ಣ ಅವರ ನಿವಾಸದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜಿ.ಮಾದೇಗೌಡರ ಕುಟುಂಬದಿಂದಲೇ ಉಪಯೋಗ ಪಡೆದು ಕೆಲ ನಾಯಕರು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಇದು ನಮಗೆ ಬೇಸರ ತಂದರೂ ಸಹ ನಿಷ್ಠಾವಂತ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಮ್ಮ ಬೆಂಬಲಕ್ಕೆ ನಿಂತಿರುವುದರಿಂದ ಕ್ಷೇತ್ರದಲ್ಲಿ ಇಂದಿಗೂ ರಾಜಕಾರಣ ಜೀವಂತವಾಗಿ ಉಳಿಸಿದೆ. ಜೊತೆಗೆ ರಾಜಕಾರಣ ಮಾಡಲು ನಮಗೂ ಸ್ಪೂರ್ತಿ ತುಂಬಿದೆ ಎಂದರು.
ನನ್ನ ಮಗನ ಮದುವೆ ಡಿ.4 ರ ಸೋಮವಾರದಂದು ನಡೆಯಲಿದೆ. ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಎಲ್ಲರೂ ಬಂದು ಶುಭ ಹಾರೈಸಿ. ಮದುವೆ ಮುಗಿದ ನಂತರ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗುತ್ತೇನೆಂದು ಭರವಸೆ ನೀಡಿದರು.
ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಈಗಾಗಲೇ 5 ಲಕ್ಷ ಹಣ ನೀಡಿದ್ದೇನೆ. ಮುಂದೆ ಬರುವ ಅನುದಾನದಲ್ಲಿ ಗ್ರಾಮದ ಲಕ್ಷ್ಮಿ ದೇವಸ್ಥಾನಕ್ಕೂ ಮತ್ತು ಮದ್ದೂರಮ್ಮ ದೇವಸ್ಥಾನಕ್ಕೂ ನನ್ನ ಕೈಲಾದ ಹಣ ಬಿಡುಗಡೆಗೊಳಿಸಲು ಕ್ರಮವಹಿಸುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಿದೇವಸ್ಥಾನ ಟ್ರಸ್ಟ್ನ ಪದಾಧಿಕಾರಿಗಳು ಮಧು ಜಿ ಮಾದೇಗೌಡರನ್ನು ಅಭಿನಂದಿಸಿ ಗೌರವಿಸಿದರು. 100 ಕ್ಕೂ ಹೆಚ್ಚು ಕಾರ್ಯಕರ್ತರು ಅವರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ಮುಖಂಡರಾದ ಆರ್.ಸಿದ್ದಪ್ಪ, ತಾ.ಪಂ. ಮಾಜಿ ಸದಸ್ಯ ಗಿರೀಶ್, ಸಿ.ಚನ್ನಶೆಟ್ಟಿ, ಕುಮಾರ್, ಮಾಯಿಶೆಟ್ಟಿ, ಎಂ.ಚನ್ನಶೆಟ್ಟಿ, ರವಿಕೃಷ್ಣಪ್ಪ, ರಮೇಶ, ರವಿ, ಲೋಕೇಶ್, ಅರವಿಂದ, ಶೇಖರ್, ಜೈಸ್ವಾಮಿ, ಶಿವಲಿಂಗೇಗೌಡ, ಸಂದೀಪ, ಸಿದ್ದೇಗೌಡ, ಪಟೇಲ್ ರಾಮಕೃಷ್ಣ ಸೇರಿದಂತೆ ಹಲವರಿದ್ದರು.