ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸೇನಾನಿಗಳನ್ನು ಗೌರವಿಸೋಣ, ದೇಶಭಕ್ತರ ತ್ಯಾಗವನ್ನು ಸ್ಮರಿಸೋಣ, ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿ ಎಲ್ಲರಿಗೂ ಸಂತಸ ಹಂಚೋಣ ಎಂದು ಹರಿಯಾಣದ ಸ್ಟಾರೆಕ್ಸ್ ವಿವಿ ಉಪಕುಲಪತಿ ಪ್ರೊ.ಮಧನ್ಮೋಹನ್ ಗೋಲೆ ಹೇಳಿದರು.
ಮಂಡ್ಯ ನಗರದ ಮಾಂಡವ್ಯ ಎಕ್ಸಲೆನ್ ಪದವಿಪೂರ್ವ ಕಾಲೇಜು ಆವರಣದಲ್ಲಿ ಎಸ್.ಬಿ.ಶಿಕ್ಷಣ ಸಮೂಹ ಸಂಸ್ಥೆಗಳು ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಭಾರತ ದೇಶದ ಸಂಸ್ಕಾರ ಮತ್ತು ವೈಜ್ಞಾನಿಕ ವಿಚಾರಗಳನ್ನು ವಿಶ್ವವೇ ಪಾಲಿಸುತ್ತಿದೆ, ನಮಸ್ಕಾರ ಎನ್ನುವ ಗೌರವಸೂಚಕ ಪದವನ್ನು ಇಡೀ ಜಗತ್ತೆ ಪಾಲಿಸುತ್ತಿದೆ, ನಮಗೆ ಶಿಸ್ತು ಉತ್ತಮ ಶಿಕ್ಷಣದಿಂದ ದೊರೆಯುತ್ತದೆ ಎಂದರು.
ಎಸ್.ಬಿ. ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿ, ನಮ್ಮ ದೇಶವನ್ನು ವಿಶ್ವದ ಗುರುವನ್ನಾಗಿಸಲು ಸಂಕಲ್ಪ ಮಾಡಲಾಗಿದೆ, ಎಲ್ಲರೂ ಇಂತಹ ವೈಜ್ಞಾನಿಕ ವೈಚಾರ ವಿಚಾರಗಳ ಅರಿಯಲು ಸನ್ನದ್ಧರಾಗಬೇಕಿದೆ ಎಂದರು.
ವಿದ್ಯಾರ್ಥಿಗಳು ಪುಸ್ತಕಗಳ ಹುಳುವಾಗದೆ ಬದುಕನ್ನು ಕಟ್ಟಿಕೊಳ್ಳುವುದನ್ನು ಕಲಿಯಬೇಕಿದೆ, ಸಕರಾತ್ಮಕ ಚಿಂತನೆಗಳು ನಿಮಗೆ ಬೇಕಾಗಿದೆ, ಭಾರತ ದೇಶವು ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದೆ, ವೈಜ್ಞಾನಿಕ ಆಲೋಚನೆಗಳ ಅಮೃತ ಸಿಂಚನದೊಂದಿಗೆ ಎಲ್ಲರಿಗೂ ವಿಸ್ತಾರಗೊಳ್ಳಲಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು.
ಎಸ್ ಬಿ ಏಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.