12ನೇ ಶತಮಾನದಲ್ಲಿ ಅಸ್ಪೃಶ್ಯತೆ,ಅಸಮಾನತೆಯಂತಹ ಅನಿಷ್ಠ ಪಿಡುಗುಗಳನ್ನು ತಮ್ಮ ವಚನಗಳ ಮೂಲಕ ನಿವಾರಣೆ ಮಾಡಿದ ಮಡಿವಾಳ ಮಾಚಿದೇವರ ವಚನಗಳು ಇಂದಿಗೂ ಪ್ರಸ್ತುತ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ ರಾಮೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮ ಪಂಚಾಯಿತಿಯ ಹೊಸ ಮಾವಿನಕೆರೆ ಗ್ರಾಮದ ಮಡಿವಾಳ ಬಡಾವಣೆಯಲ್ಲಿ ಶ್ರೀ ಮಡಿವಾಳ ಮಾಚಿದೇವ ಸಂಘದ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಅಂಗವಾಗಿ ಸಂಘದ ನಾಮಫಲಕ ಅನಾವರಣ ಗೊಳಿಸಿ ಅವರು ಮಾತನಾಡಿದರು.
ಮಡಿವಾಳ ಮಾಚಿದೇವರು ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾಗಿದ್ದು,ಅವರ ಜೊತೆ ಜೊತೆಗೆ ತಮ್ಮ ವಚನಗಳ ಮೂಲಕ ಸಾಮಾಜಿಕ ಸಂದೇಶವನ್ನು ಸಾರಿದರು. ಅವರ ವಚನಗಳ ಸಾರವು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಜಗಜ್ಯೋತಿ ಬಸವಣ್ಣನವರಂತೆಯೇ,ಮಡಿವಾಳ ಮಾಚಿದೇವರು ಸಮಾಜವನ್ನು ತಿದ್ದಲು ಹಲವಾರು ಶ್ರೇಷ್ಠ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಸಮಾಜದ ಪರಿವರ್ತನೆಗೆ, ಉತ್ತಮ ಸಮಾಜ ನಿರ್ಮಾಣಕ್ಕೆ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತಹ ವಚನಗಳನ್ನು ಸೃಷ್ಟಿಸಿದ ಮಡಿವಾಳ ಮಾಚಿದೇವರು ಶ್ರೇಷ್ಠ ಶಿವ ಶರಣರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ. ಸದಸ್ಯರಾದ ಮಾಧವ ಪ್ರಸಾದ್, ಹೆತ್ತಗೋನಹಳ್ಳಿ ನಾರಾಯಣ್, ಪೂವನಹಳ್ಳಿ ವೆಂಕಟರಾಮು, ಹೊಸಮಾವಿನಕೆರೆ ಗ್ರಾಮದ ಸುರೇಶ್, ಬಸವರಾಜು, ಗೋವಿಂದ ಶೆಟ್ಟಿ ,ನಾಗೇಶ್, ಮಂಜಶೆಟ್ಟಿ, ವೆಂಕಟಶೆಟ್ಟಿ, ತಿಮ್ಮಶೆಟ್ಟಿ ಚೇತನ್ ಶೆಟ್ಟಿ , ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.