ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರವನ್ನು ಕೈಗೊಳ್ಳಲು ೧ ಕೋಟಿ ೩೦ ಲಕ್ಷ ರೂ.ಗಳ ತಾತ್ಕಾಲಿಕ ಬಜೆಟ್ ಅನ್ನು ಮಂಡನೆ ಮಾಡಿದ್ದು, ಪ್ರಚಾರದ ವೆಚ್ಚವು ಪಾರದರ್ಶಕವಾಗಿರಲಿ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಚಾರ ಸಮಿತಿಯ ಉಪ ಸಮಿತಿಗಳು ಪ್ರಚಾರಕ್ಕೆ ಸಂಬಂಧಿಸಿದಂತೆ ಸಭೆ ಸೇರುವ ಮೂಲಕ ಕಾರ್ಯಭಾರವನ್ನು ನಿರ್ವಹಿಸಬೇಕು. ಬಸ್ಗಳ ಮೇಲೆ ಪ್ರಚಾರದ ಪೋಸ್ಟರ್ ಗಳಲ್ಲಿ ಮುಖ್ಯವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನಾಂಕ, ಸ್ಥಳವನ್ನು ಬರೆದಿರಬೇಕು. ಜೊತೆಗೆ ಹಾಸನಾಂಬ ಜಾತ್ರೆಯಲ್ಲಿಯೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರವನ್ನು ನಡೆಸಬೇಕು ಎಂದರು.
ಪ್ರಚಾರ ಸಮಿತಿಯ ಉಪ ಸಮಿತಿಯವರು ಈಗಾಗಲೇ ಪ್ರತ್ಯೇಕವಾಗಿ ಸಭೆ ನಡೆಸಿ ಆಯಾಯ ಸಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಪಟ್ಟಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿಯವರೆಗೆ ನಡೆದಿರುವ ರೂಪುರೇಷೆಯ ಕ್ರಿಯಾಯೋಜನೆ ಹಾಗೂ ಬಜೆಟ್ ವಿವರವನ್ನು ಸಭೆಗೆ ವಿವರವಾಗಿ ತಿಳಿಸಿದರು.
ಮನೆ ಮನೆಗಳ ಮೇಲೆ, ಆಟೋ, ಕಾರ್ ಸ್ಟಿಕ್ಕರ್,ಗೋಡೆ ಬರಹ,ಸ್ಟಿಕ್ಕರ್,ಸರ್ಕಾರಿ ಹೋರ್ಡಿಂಗ್ಸ್ ಗಳಲ್ಲಿ ಪ್ರಮುಖ ವೃತ್ತಗಳಲ್ಲಿ ರಿಂಗ್ಸ್ ಹಾಗೂ ಇತರೆ ಫ್ಲೆಕ್ಸ್ ಅಳವಡಿಕೆ ಬಗ್ಗೆ ಜೊತೆಗೆ ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ,ಮುದ್ರಣ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಚಾರ ಮಾಡುವ ಬಗ್ಗೆ ವಿವರವಾದ ವರದಿಯನ್ನು ಸಭೆಗೆ ತಂದು ಪ್ರಚಾರ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಲಾಯಿತು.
ಜಿಲ್ಲೆಯ ಜನರು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪರಿಣಾಮಕಾರಿ ಪ್ರಚಾರದ ಅವಶ್ಯಕವಿದೆ. ಸುತ್ತಮುತ್ತಲಿನ ಹಳ್ಳಿ, ನಗರ ಪ್ರದೇಶದ ಜನರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡುವುದು ಪ್ರಚಾರ ಸಮಿತಿಯ ಜವಾಬ್ದಾರಿಯಾಗಿದ್ದು, ಎಲ್ಲರೂ ವ್ಯವಸ್ಥಿತ ಹಾಗೂ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸೋಣ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಸಮ್ಮೇಳನದ ಪ್ರಚಾರ ಮಾಡಲು ೧೫ ಲಕ್ಷ ರೂ.ವನ್ನು ನಿಗದಿಪಡಿಸಲಾಗಿದೆ. ಇರುವ ವೆಚ್ಚದಲ್ಲಿಯೇ ಬಹಳ ಚುರುಕಾಗಿ ಪ್ರಚಾರ ನಡೆಯಬೇಕು ಎಂದರು.
ಕ.ಸಾ.ಪ. ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ಮಾತನಾಡಿ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪ್ರಚಾರ ಸಮಿತಿಯ ಖರ್ಚು ಹಾಗೂ ವೆಚ್ಚವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಸಲಾಗಿದೆ. ಅದರಂತೆಯೇ ಎಲ್ಲರೂ ಲಭ್ಯವಿರುವ ಅನುದಾನದಲ್ಲಿ ಪರಿಣಾಮಕಾರಿ ಪ್ರಚಾರವನ್ನು ಕೈಗೊಳ್ಳಬೇಕು. ಇನ್ನೆರಡು ದಿನಗಳಲ್ಲಿ ಮೊದಲ ಕಂತಿನ ಹಣ ಬಿಡುಗಡೆಯಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ಬೈಸಿಕಲ್ ಜಾಥಾ, ಪ್ರತಿ ಬಸ್ ನಿಲ್ದಾಣಗಳಲ್ಲಿ ಫ್ಲೆಕ್ಸ್ ಅಳವಡಿಕೆ, ಆಟೋ ಚಾಲಕರುಗಳಿಗೆ ಕನ್ನಡದ ಬಾವುಟ ಹಾಗೂ ಸ್ಟಿಕ್ಕರ್ಸ್ಗಳನ್ನು ನೀಡಿ ಆ ಮೂಲಕ ನವೆಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೂ ಪ್ರಚಾರ ನಡೆಸಬಹುದು. ಲಾರಿ ಹಾಗೂ ಬಸ್ -ಇತರೆ ವಾಹನಗಳ ಮಾಲೀಕರ/ಚಾಲಕರ ಸಂಘದವರಲ್ಲಿ ಮನವಿ ಮಾಡಿ ತಮ್ಮ ತಮ್ಮ ವಾಹನಗಳಲ್ಲಿ ಸಮ್ಮೇಳನದ ಭಿತ್ತಿಪತ್ರ -ಸ್ಟಿಕ್ಕರ್ಗಳನ್ನು ಅಂಟಿಸಿ ಪ್ರಚಾರ ಮಾಡುವುದರ ಜೊತೆಗೆ ಎಲ್ಲರೂ ಸಹಕರಿಸಲು ಮನವಿ ಮಾಡಲಾಯಿತು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹಾಗೂ ಪ್ರಚಾರ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಸಂಚಾಲಕರು ಎಸ್ ಹೆಚ್ ನಿರ್ಮಲ,ಕಸಾಪ ಪದಾಧಿಕಾರಿಗಳಾದ ಹರ್ಷ ಪಣ್ಣೆದೊಡ್ಡಿ ,ಹೊಳಲು ಶ್ರೀಧರ್,ಜಿ.ಧನಂಜಯ ದರಸಗುಪ್ಪೆ,ಎಲ್. ಕೃಷ್ಣ,ಚಂದ್ರಲಿಂಗು, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸಮಿತಿಯ ಸದಸ್ಯರಾದ ಸಬ್ಬನಹಳ್ಳಿ ಶಶಿಧರ,ವಿನಯ್ ಕುಮಾರ್,ಮಂಚಶೆಟ್ಟಿ,ಚಿಕ್ಕನಾಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.