ಮಳವಳ್ಳಿ ತಾಲ್ಲೂಕಿನ ಹಲಗೂರಿನ ಜೆಪಿಎಂ ಬಡಾವಣೆಯ ನಿವಾಸಿ ಚಂದನ್ ಅವರ ಮನೆಯ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಚಿನ್ನ ಬೆಳ್ಳಿ ಆಭರಣಗಳನ್ನು ಎಗರಿಸಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಬಿ.ಎಸ್ ಚಂದನ್ ಬಿನ್ ಸುಬ್ರಹ್ಮಣ್ಯ ಅವರ ಮನೆಯಲ್ಲಿ ರಾತ್ರಿ 8 ಗಂಟೆಯ ವೇಳೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನುಗ್ಗಿರುವ ಅಪರಿಚಿತ ಕಳ್ಳರು, 30 ಗ್ರಾಂ ತೂಕದ ಚಿನ್ನ ನೆಕ್ಲೆಸ್, 10 ಗ್ರಾಂ ತೂಕದ ಚಿನ್ನದ ಕುತ್ತಿಗೆ ಸರ ಮತ್ತು 700 ಗ್ರಾಂ ತೂಕದ ಎರಡು ಬೆಳ್ಳಿ ತಟ್ಟೆಗಳು ಒಳಗೊಂಡಂತೆ ಅಂದಾಜು ₹2.50 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನ ಬೆಳ್ಳಿ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲಿಸಿದರು. ಸ್ಥಳಕ್ಕೆ ಮಂಡ್ಯ ಜಿಲ್ಲಾ ಅಪರ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಗಂಗಾಧರಸ್ವಾಮಿ, ಮಳವಳ್ಳಿ ಡಿ ವೈ ಎಸ್ ಪಿ ಕೃಷ್ಣಪ್ಪ, ಹಲಗೂರು ಪಿ ಎಸ್ ಐ ಮಹೇಂದ್ರ ಬೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.