ಮೋದಿ ಗ್ಯಾರಂಟಿಯನ್ನು ಲೇವಡಿ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ವಿಪಕ್ಷಗಳನ್ನು ಜೈಲು ಪಾಲಾಗಿಸುವುದೇ ‘ಮೋದಿ ಗ್ಯಾರಂಟಿ’ ಎಂದು ತಿರುಗೇಟು ನೀಡಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಮೋದಿ ಗ್ಯಾರಂಟಿ’ ಬಗ್ಗೆ ತನ್ನ ಹೆಚ್ಚಿನ ಭಾಷಣಗಳಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಉತ್ತರ ಬಂಗಾಳದ ಜಲಪೈಗುರಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದಾಗಲೂ ಪ್ರಧಾನಿ ಮೋದಿ ಈ ಗ್ಯಾರಂಟಿಗಳ ಪ್ರಸ್ತಾಪ ಮಾಡಿದ್ದರು. ಇದಾದ ಒಂದು ದಿನದ ಬಳಿಕ ಬಂಕೂರಾದಲ್ಲಿ ನಡೆದ ಪ್ರಚಾರ ಕಾರ್ಯದ ವೇಳೆ ಮೋದಿಗೆ ಬ್ಯಾನರ್ಜಿ ತಿರುಗೇಟು ನೀಡಿದರು.
“ಅವರು ಎಷ್ಟು ಬೇಕಾದರೂ ಪಿತೂರಿ ಮಾಡಲಿ. ಜೂನ್ 4 ರ ನಂತರ ಭ್ರಷ್ಟರ ವಿರುದ್ಧ ಕ್ರಮ ಹೆಚ್ಚಾಗುತ್ತದೆ ಎಂದು ನಾನು ನಿಮಗೆ ಗ್ಯಾರಂಟಿ ನೀಡಲು ಬಯಸುತ್ತೇನೆ. ನೀವು ಹೇಳಿ, ನಾವು ಈ ದೇಶದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಬೇಕೇ ಅಥವಾ ಬೇಡವೇ? ಭ್ರಷ್ಟರನ್ನು ಜೈಲಿಗೆ ಕಳುಹಿಸುವುದು ಬೇಡವೇ? ಟಿಎಂಸಿಯ ಭ್ರಷ್ಟಾಚಾರವನ್ನು ತೊಲಗಿಸಬೇಕಲ್ಲವೇ? ಇದು ಮೋದಿ ಗ್ಯಾರಂಟಿ” ಎಂದು ಹೇಳಿದ್ದರು.
ಇಂದು ಬಂಕುರಾದಲ್ಲಿ ನಡೆದ ರ್ಯಾಲಿಯಲ್ಲಿ ಬ್ಯಾನರ್ಜಿ ಮೋದಿ ಗ್ಯಾರಂಟಿಯನ್ನು ಟೀಕಿಸಿದರು. “ಮೋದಿಯವರ ಗ್ಯಾರಂಟಿ ಏನು? ಜೂನ್ ನಂತರ ಎಲ್ಲರನ್ನೂ ಜೈಲಿಗೆ ಹಾಕುತ್ತಾರೆ. ಇದು ಪ್ರಧಾನಿಯಾದವರ ಮಾತನಾಡುವ ಶೈಲಿಯೇ? ಜೂನ್ನಲ್ಲಿ ಚುನಾವಣೆ ಮುಗಿದ ನಂತರ ಜನರನ್ನು ಆರಿಸಿ ಬಂಧಿಸುತ್ತಾರೆ? ಎಲ್ಲರನ್ನೂ ಜೈಲಿಗೆ ಹಾಕುತ್ತಾರೆಯೇ” ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳು ಹಿಂದೂಸ್ತಾನವನ್ನು ಜೈಲಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದ ಅವರು, “ನೀವು ಎಲ್ಲೆಂದರಲ್ಲಿ ಜೈಲುಗಳನ್ನು ಮಾಡಿದ್ದೀರಿ. ನಿಮ್ಮ ಜೇಬಿನಲ್ಲಿ ಎನ್ಐಎ ಮತ್ತು ಇನ್ನೊಂದು ಜೇಬಿನಲ್ಲಿ ಸಿಬಿಐ ಇದೆ. ಒಂದು ಜೇಬಿನಲ್ಲಿ ಇಡಿ ಮತ್ತು ಇನ್ನೊಂದು ಜೇಬಿನಲ್ಲಿ ಆದಾಯ ತೆರಿಗೆ ಇಲಾಖೆಯಿದೆ” ಎಂದು ದೂರಿದರು.
“ಎನ್ಐಎ ಮತ್ತು ಸಿಬಿಐ ಬಿಜೆಪಿಯ ಸಹೋದರರು. ಆದಾಯ ತೆರಿಗೆ ಮತ್ತು ಇಡಿ ತೆರಿಗೆಗಳು ಬಿಜೆಪಿ ನಿಧಿ ಸಂಗ್ರಹದ ಪೆಟ್ಟಿಗೆಯಾಗಿದೆ,” ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಅವರು ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ಇನ್ನಷ್ಟು ಬಲತುಂಬಿದರು.
ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಏಳು ಹಂತಗಳ ಚುನಾವಣೆ ನಡೆಯಲಿದೆ. 2019 ರಲ್ಲಿ 18 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನ ಪಡೆದಿರುವ ಬಿಜೆಪಿ, ಆಡಳಿತಾರೂಢ ತೃಣಮೂಲ ವಿರುದ್ಧ ಈಗ ಮತ್ತೆ ಕಣಕ್ಕೆ ಇಳಿದಿದೆ.