ಸಾಮಾನ್ಯ ಬಡ ರೈತನ ಕುಟುಂಬದ ಮಗನಾದ ನನ್ನನ್ನು ಎಲ್ಲರೂ ತೇಜೋವದೆ ಮಾಡುತ್ತಿದ್ದು, ಇದಕ್ಕೆಲ್ಲ ಮತದಾರ ದೇವರೇ ಉತ್ತರ ಕೊಡುತ್ತಾನೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಆರ್.
ರಾಮಚಂದ್ರ ತಿಳಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಕೋಣನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, 30 ಹಳ್ಳಿಗಳಲ್ಲಿ ಸೋಮವಾರ ಪ್ರಚಾರ ಮಾಡಿದ್ದೇನೆ.ಆದರೆ ಕೆಲವರು ಜೆಡಿಎಸ್ ಅಭ್ಯರ್ಥಿ ಪೋನ್ ಸ್ವಿಚ್ ಆಫ್ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.ಈ ರೀತಿ ಅಪಪ್ರಚಾರ ಮಾಡುವುದು ಸರಿಯಿಲ್ಲ.ನಾನು ಏಕಾಂಗಿಯಲ್ಲ, ನಿಮ್ಮೆಲ್ಲರ ಪ್ರೀತಿ-ವಿಶ್ವಾಸದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿದೆ.ನಾನು ಒಬ್ಬ ಸೇವಕ ನಿಮ್ಮೂರಿನ ಮಗ ಎಂದು ಒಗ್ಗಟ್ಟಾಗಿ ಪ್ರತಿಯೊಬ್ಬರೂ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿರುವ ಪಂಚರತ್ನ ಯೋಜನೆ ರೂಪಿಸಿದೆ.ಅವುಗಳ ಅನುಷ್ಠಾನಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದರು.
ನಾನು ಮನ್ ಮುಲ್ ನಿರ್ದೇಶಕನಾಗಿ ಆಯ್ಕೆಯಾಗಲು ನೀವೆಲ್ಲರೂ ಸಹಕಾರ ನೀಡಿದ್ದೀರಿ, ಅದೇ ರೀತಿ ಸಿಮೆಂಟ್ ಉದ್ಯಮಿ ಆಗಿ ಬೆಳೆಯಲು ನೀವೆಲ್ಲ ಆಶೀರ್ವಾದ ಮಾಡಿದ್ದೀರಿ. ಮೇ 10ರಂದು ನಡೆಯುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನೀವೆಲ್ಲರೂ ಅತ್ಯಧಿಕ ಮತಗಳಿಂದ ನನ್ನನ್ನು ಗೆಲ್ಲಿಸಿಕೊಡಿ ಎಂದು ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಹಳ್ಳಿಗಳು,ರೈತರು, ಮಕ್ಕಳ ಭವಿಷ್ಯ ಉಳಿಯಬೇಕು.ಅದಕ್ಕೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕಾದರೆ ರಾಮಚಂದ್ರ ಅವರು ಶಾಸಕರಾಗಿ ಆಯ್ಕೆಯಾಗಬೇಕು ಎಂದು ಹೇಳಿದರು.
ಜೆಡಿಎಸ್ ಪಕ್ಷ ಎಂ.ಶ್ರೀನಿವಾಸ್ ಅವರಿಗೆ ನಾಲ್ಕು ಬಾರಿ ಬಿ. ಫಾರಂ ಕೊಟ್ಟಿದೆ, ಮೂರು ಬಾರಿ ಎಂಎಲ್ಎ ಮಾಡಿದೆ. ಈಗಾಗಲೇ ಮಂಡ್ಯ ನಗರಸಭಾ ಅಧ್ಯಕ್ಷರು ಮತ್ತು ಸದಸ್ಯರು ಒಗ್ಗಟ್ಟಾಗಿ ರಾಮಚಂದ್ರ ಪರ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೊನಗನಹಳ್ಳಿ ರವಿ 50,000 ಹಾಗೂ ಪಣಕನಹಳ್ಳಿ ಗ್ರಾಮದಲ್ಲಿ ವಕೀಲ ರಾಘವೇಂದ್ರ ಎಂಬವರು ರಾಮಚಂದ್ರ ಅವರ ಚುನಾವಣಾ ಖರ್ಚಿಗಾಗಿ 25 ರೂ. ಸಾವಿರ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯರಾಮ್, ಗ್ರಾಪಂ ಸದಸ್ಯ ಮಂಜು, ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಸೇರಿದಂತೆ ಇತರರು ಹಾಜರಿದ್ದರು.