ಮಂಡ್ಯ ನಗರದ ಸೆಂಟ್ ಜಾನ್ಸ್ ಶಾಲೆಯ ಮೇಲ್ವಿಚಾರಕ ಅಂತೋಣಿ ಅಲೆಕ್ಸ್ ಭಾನುವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಗರದ ಸೆಂಟ್ ಜಾನ್ಸ್ ಶಾಲೆಯಲ್ಲಿ ಮೇಲ್ವಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂತೋಣಿ ಅಲೆಕ್ಸ್ ಕಳೆದ ಹದಿನೈದು ದಿನಗಳ ಹಿಂದೆ ಮದ್ಯ ಸೇವಿಸಿ ಬಂದಿದ್ದರೆಂದು ಆರೋಪಿಸಿ ಫಾದರ್ ಲುರ್ದ್ ಪ್ರಸಾದ್ ಅವರು ಆತನಿಗೆ ಎಚ್ಚರಿಕೆ ನೀಡಿ ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡಿದ್ದರು ಎನ್ನಲಾಗಿದೆ.
ಅಂತೋಣಿ ಕೆಲ ದಿನಗಳ ಹಿಂದೆ ಮತ್ತೆ ಶಾಲೆಗೆ ಬರದ ಕಾರಣ ವಿಚಾರಿಸಲಾಗಿ,ನಾನು ಮಾನಸಿಕವಾಗಿ ನೊಂದಿದ್ದೇನೆ.ಆದ ಕಾರಣ ಶಾಲೆಗೆ ಬರಲಾಗುತ್ತಿಲ್ಲ ಎಂದು ತಿಳಿಸಿದ್ದರು ಎನ್ನಲಾಗಿದೆ.
ಅಂತೋಣಿ ಅಲೆಕ್ಸ್ ಭಾನುವಾರ ಸಂಜೆ ಮಂಡ್ಯ ನಗರದ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ ಇರುವ ಮರುಕಾಡುದೊಡ್ಡಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂತೋನಿ ಅಲೆಕ್ಸ್ ತನ್ನ ತಂದೆ, ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಮೃತದೇಹವನ್ನು ಮಿಮ್ಸ್ ಶವಾಗಾರದಲ್ಲಿ ಇಡಲಾಗಿದ್ದು,ಪಂಚನಾಮೆ ನಡೆಯಬೇಕಿದೆ.
ಸೆಂಟ್ ಜಾನ್ಸ್ ಶಾಲೆಯ ಮೇಲ್ವಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂತೋಣಿ ಅಲೆಕ್ಸ್ ಮದ್ಯ ಸೇವಿಸಿದ್ದ ಹಿನ್ನೆಲೆಯಿಟ್ಟು ಫಾದರ್ ಲುರ್ದ್ ಪ್ರಸಾದ್ ಅವರು ಕ್ಷಮಾಪಣೆ ಅರ್ಜಿಯನ್ನು ಬರೆಸಿಕೊಂಡ ನಂತರ ಅವರು ಮನ ನೊಂದಿದ್ದರು. ಈ ಕಾರಣಕ್ಕಾಗಿಯೇ ಅಂತೋಣಿ ಅಲೆಕ್ಸ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಅಂತೋಣಿ ಅಲೆಕ್ಸ್ ಆತ್ಮಹತ್ಯೆಗೆ ನಿಜವಾದ ಕಾರಣವೇನು ಎಂಬುದನ್ನು ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರೇ ತನಿಖೆ ಮೂಲಕ ಬಹಿರಂಗ ಪಡಿಸಬೇಕಿದೆ.