ನಾನೆರುವೆತ್ತರಕ್ಕೆ.. ನೀನೇರಬಲ್ಲೆಯಾ.. ನಾನಿಳಿಯುವ ಆಳಕ್ಕೆ.. ನೀನಿಳಿಯಬಲ್ಲೆಯ… ಎಂದು ಹೇಳುವ ಯುಗದ ಕವಿ ಕುವೆಂಪು ಅವರ ಚಿಂತನೆ ಚಿರಾಯುವದುದು, ಅವರ ಅಖಂಡ ಕರ್ನಾಟಕದ ದಾರ್ಶನಿಕ ಕಲ್ಪನೆ ಸಾರ್ವಕಾಲಿಕವಾದದ್ದು ಎಂದು ಮಂಜುಳ ಜಯಪ್ರಕಾಶಗೌಡ ಹೇಳಿದರು.
ಕರ್ನಾಟಕ ಸಂಘದ ಮಹಿಳಾ ಘಟಕದ ವತಿಯಿಂದ ಮಂಡ್ಯನಗರದ ಕೆ ಟಿ ಶಿವಲಿಂಗಯ್ಯ ಸಭಾಂಗಣದಲ್ಲಿ ಜರುಗಿದ ‘ಕಾವ್ಯಾನು ಸಂಧಾನ’ ಎಂಬ ಕಾರ್ಯಕ್ರಮದಲ್ಲಿ ಕವಿತೆಯ ಓದು ,ಗಾಯನ, ವ್ಯಾಖ್ಯಾನ, ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುವೆಂಪು ಅವರ ಶಿಷ್ಯರೇ ಆಗಿದ್ದ ಜಿ ಎಸ್ ಎಸ್, ಕನ್ನಡ ನಾಡು ಕಂಡ ಮಹತ್ವದ ಕವಿ. ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ ಎಂದು ಹೇಳುವ ಕವಿ ಜಿಎಸ್ಎಸ್ ಗೆ ಕತ್ತಲು ಮತ್ತು ಬೆಳಕು ಹೆಚ್ಚು ಕಾಡುವ ಸಂಗತಿಗಳಾಗಿವೆ ಎಂದು ಮಾತನಾಡಿದರು.
ಕಾವ್ಯಾನು ಸಂಧಾನ ಎಂಬ ಕಾರ್ಯಕ್ರಮವು ಕನ್ನಡ ಕಾವ್ಯಗಳ ಓದು ಗಾಯನ, ವ್ಯಾಖ್ಯಾನ, ಸಂವಾದ ಮಾಡುವ ಉದ್ದೇಶದಿಂದ ಆಯೋಜನೆಗೊಂಡಿದ್ದು ಸಹೃದಯರಿಗೆ ಕಾವ್ಯವನ್ನು ದಾಟಿಸುವ ಸಾರ್ವಜನಿಕರಲ್ಲಿ ಸಾಹಿತ್ಯಾಸಕ್ತಿಯನ್ನು ಉಂಟು ಮಾಡುವ ಉದ್ದೇಶವನ್ನು ಹೊಂದಿದ್ದು “ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು” ಎನ್ನುವಂತೆ ಹಿರಿಯರು – ಕಿರಿಯರು ಎಲ್ಲ ಸೇರಿ ಕಾವ್ಯವನ್ನು ಕುರಿತು ಚರ್ಚಿಸುವ, ಚಿಂತಿಸುವ ಕ್ರಮ ಆರೋಗ್ಯಕರವಾದದ್ದು ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ, ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಭದ್ರಬುನಾದಿಯಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ.ಎಸ್ ಸಿ ಮಂಗಳಾ, ಎಂ ಮಂಚಶೆಟ್ಟಿ, ಚೆಲುವರಾಜು, ಆನಂದ್, ಡಾ.ಅನಿತ.ಎಂ.ಎಸ್. ಉಪಸ್ಥಿತರಿದ್ದರು.