ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ”ಅಕ್ಷರದವ್ವ ಸಾವಿತ್ರಿಬಾಯಿ ಪುಲೆ- 2024ರ ವಾರ್ಷಿಕ ಪ್ರಶಸ್ತಿಗೆ ಕವಿ, ‘ಜನೋದಯ’ ಪತ್ರಿಕೆಯ ಸಂಪಾದಕಿ ಮಂಜುಳ ಕಿರುಗಾವಲು ಆಯ್ಕೆಯಾಗಿದ್ದಾರೆ.
ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನವಾದ ಜನವರಿ 3ರಂದು ವಿಜಯಪುರದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ, ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲಿನ ಸಿದ್ದಯ್ಯ ಹಾಗೂ ಮಹಾದೇವಮ್ಮ ಅವರ ಮಗಳಾಗಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು, ಪತ್ರಿಕಾ ರಂಗದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ‘ಜನೋದಯ’ ಪ್ರಾದೇಶಿಕ ದಿನ ಪತ್ರಿಕೆಯ ಸಂಪಾದಕರಾಗಿದ್ದಾರೆ.
ಈ ಪತ್ರಿಕೆಯು ಮಂಡ್ಯ, ಮೈಸೂರು, ಚಾಮರಾಜನಗರ ರಾಮನಗರ, ಕೊಡಗು ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಪ್ರಕಟಿತಗೊಳ್ಳುತ್ತಿದೆ. ಅಲ್ಲದೇ ಶಾಲಾ ಕಾಲೇಜು ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ ಇವರು ಮೂರ್ನಾಲ್ಕು ವರ್ಷಗಳಿಂದ ಸಾಹಿತ್ಯ ಅನುವಾದದ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರಿಗೆ ಈಗಾಗಲೇ ಪತ್ರಿಕಾ ರಂಗದ ಸೇವೆಗೆ 2021ರಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಮೂಕನಾಯಕ ಪ್ರಶಸ್ತಿ, ಕಾಯಕ ಯೋಗಿ ಪುರಸ್ಕಾರ, ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡ ಮಾಡಲಾಗುವ ವಾರ್ಷಿಕ ಪ್ರಶಸ್ತಿ, ಆದರ್ಶ ಮಹಿಳೆ ಪುರಸ್ಕಾರ ಹೀಗೆ ಹಲವು ಪ್ರಶಸ್ತಿಗಳು ಸಂದಿವೆ.