ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್) ಲಿಖಿತ ಪರೀಕ್ಷೆ ನಡೆದಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಯೊಬ್ಬನಿಗೆ ₹ 30 ಲಕ್ಷ ಇದ್ದರೆ ಮಾತ್ರ ಇಲ್ಲಿಗೆ ಬಾ.. ಇಲ್ಲದಿದ್ದರೆ ಬರಬೇಡ.. ಎಂದು ಮನ್ಮುಲ್ ನಿರ್ದೇಶಕರೊಬ್ಬರು ಕೇಳಿದ್ದಾರೆ, ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಮಂಡ್ಯ ವಿಧಾನಸಭೆಯ ಸರ್ವೋದಯ ಕರ್ನಾಟಕ ಪಕ್ಷ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಗಂಭೀರ ಆರೋಪ ಮಾಡಿದ್ದಾರೆ.
ಮನ್ಮುಲ್ ನೇವಕಾತಿ ಪ್ರಕ್ರಿಯೆಯಲ್ಲಿ ಹುದ್ದೆಗಳನ್ನು ಮಾರಾಟ ಮಾಡಲು ಇಬ್ಬರು ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮನ್ಮುಲ್ ನಲ್ಲಿ ಯಾವುದೇ ಆಕ್ರಮ ನೇಮಕಾತಿ ನಡೆದರೂ ಅದು ಮುಂದೊಂದು ದಿನ ತನಿಖೆ ನಡೆಯುವುದು ಖಚಿತ. ಹಲವು ಅಭ್ಯರ್ಥಿಗಳು ಈ ಬಗ್ಗೆ ನನ್ನ ಬಳಿ ಬಂದು ಹುದ್ದೆಗಳನ್ನು ಹಣಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ನೀಡಿದ್ಧಾರೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
ಇಬ್ಬರು ನಿರ್ದೇಶಕರು ನೇರವಾಗಿಯೇ ಹಣ ಕೇಳುತ್ತಿದ್ದಾರೆ
ಮನ್ಮುಲ್ ನ 12 ನಿರ್ದೇಶಕರಲ್ಲಿ ಇಬ್ಬರು ನಿರ್ದೇಶಕರು ನೇರವಾಗಿಯೇ ಹಣ ಕೇಳುತ್ತಿದ್ದಾರೆ, ಹಣವಿದ್ದರೆ ಕೆಲಸ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ರೀತಿ ಆದ್ರೆ ಬಡವರ ಮಕ್ಕಳು, ಪ್ರತಿಭಾನ್ವಿತರು, ರೈತರ ಮಕ್ಕಳಿಗೆ ಕೆಲಸವೆಲ್ಲಿ ಸಿಗುತ್ತದೆ. ಈ ಕೆಲಸಗಳಿಗಾಗಿ ಅಭ್ಯರ್ಥಿಗಳು ಮನೆ ಮಾರಾಟ ಮಾಡಿ ಹಣ ಹೊಂದಾಣಿಕೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಭ್ರಷ್ಟಾಚಾರ ಬಯಲಿಗೆಳೆಯದೆ ಬಿಡುವುದಿಲ್ಲ
ಮನ್ಮುಲ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಇದನ್ನು ಬಯಲಿಗೆಳೆಯದೇ ಬಿಡುವುದಿಲ್ಲ, ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲಾ ನಿರ್ದೇಶಕರು, ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಬಣ್ಣ ಬಯಲು ಮಾಡುತ್ತದೆ ಎಂದು ಎಚ್ಚರಿಸಿದರು.
ಈ ಹಗರಣದ ಬಗ್ಗೆ ಮುಂದೊಂದು ದಿನ ತನಿಖೆ ಆಗೇ ಅಗುತ್ತೆ. ಪಿಎಸ್ಐ ಹಗರಣ, ಶಿಕ್ಷಕರ ನೇಮಕಾತಿ ಹಗರಣ ಯಾವ ರೀತಿ ಆಯಿತೋ, ಅದೇ ರೀತಿ ಮನ್ಮುಲ್ ಹಗರಣವು ಬೀದಿಗೆ ಬರುತ್ತದೆ, ಆದ್ದರಿಂದ ಅಭ್ಯರ್ಥಿಗಳು ಹಣವನ್ನು ಕೊಟ್ಟು ಈ ಹಗರಣದಲ್ಲಿ ಸಿಲುಕಿಕೊಳ್ಳಬಾರದು, ಒಂದು ವೇಳೆ ಹಾಗೆ ಮಾಡಿದರೆ ನೀವು ಕ್ರಿಮಿನಲ್ ಮೊಕ್ಕದಮೆ ಎದುರಿಸಿ ಬಂಧನವಾಗಬೇಕಾಗುತ್ತದೆ. ಸಮಾಜದಲ್ಲಿ ನಿಮ್ಮ ಮಾನ ಮರ್ಯಾದೆ ಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಭ್ಯರ್ಥಿಗಳು ಆರ್ಹತೆ (ಮೆರಿಟ್) ಆಧಾರದ ಮೇಲೆ ಆಯ್ಕೆಯಾಗಿ ಕೆಲಸ ಪಡೆಯಿರಿ, ಯಾವುದೇ ಕಾರಣಕ್ಕೂ ಹಣ ನೀಡಬೇಡಿ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಭ್ರಷ್ಟಾಚಾರವನ್ನು ಬಯಲು ಮಾಡಿ ಜನರ ಮುಂದಿಡುತ್ತೇನೆಂದು ಶಪಥ ಮಾಡಿದರು.