ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಮಾಡಿದ 1927ರ ಡಿ.25ರ ಐತಿಹಾಸಿಕ ದಿನವನ್ನು ಮಂಡ್ಯನಗರದಲ್ಲಿ ಭಾನುವಾರ ಆಚರಣೆ ಮಾಡಿದ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾರ್ಯಕರ್ತರು ” ಬನ್ನಿ ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮೃತಿಗೆ ಕೊಳ್ಳಿ ಇಡೋಣ” ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯನಗರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಮನುಸ್ಮೃತಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾರ್ಯಕರ್ತರು, ಮನುಸ್ಮೃತಿ ಚಾತುರ್ವಣ್ಯವನ್ನು ಪ್ರತಿಪಾದಿಸುವ, ಅಸಮಾನತೆಯನ್ನು ಸಾರುವ ಕೃತಿಯಾಗಿದೆ ಎಂದು ಕಿಡಿಕಾರಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಘೋಷಣೆ ಕೂಗಿದ ಕಾರ್ಯಕರ್ತರು, ಅಂಬೇಡ್ಕರ್ ಅವರು, ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಜಾತಿ ಹಾಗೂ ಲಿಂಗ ತಾರತಮ್ಯದ ಅಸಮಾನತೆಯನ್ನು ಹೇರುವ ದಲಿತ, ಹಿಂದುಳಿದ ಹಾಗೂ ಶೂದ್ರ ಸಮುದಾಯಗಳ ವಿರೋಧಿ ಮನುಸ್ಮೃತಿಯನ್ನು ಡಿ.25ರಂದು ದಹನ ಮಾಡಿದ್ದರು. ಸ್ವತಂತ್ರ ಪೂರ್ವದ ಭಾರತ ದೇಶದ ಅಲಿಖಿತ ಸಂವಿಧಾನ ಎಂದರೆ ಅದು ಮನುಸ್ಕೃತಿ ಆಧಾರಿತ ಜಾತಿವ್ಯವಸ್ಥೆಯಾಗಿತ್ತು ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, 1927 ಡಿ.25ರಂದು ಮಹರ್ ನಲ್ಲಿರುವ ಚೌಡಾರ್ ಕೆರೆಯ ನೀರು ಮುಟ್ಟುವ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಹಮ್ಮಿಕೊಂಡಾಗ, ಮೇಲ್ಜಾತಿಯವರು ಹಲ್ಲೆ ನಡೆಸಲು ಮುಂದಾಗುತ್ತಾರೆ. ಈ ಸನಾತನ ಧರ್ಮವನ್ನ ಪ್ರತಿಪಾದಿಸುತ್ತಿರುವ ಮನಸ್ಮೃತಿಯನ್ನು ಬಾಬಾ ಸಾಹೇಬರು ಸುಟ್ಟು ಅಸ್ಪೃಶ್ಯತೆಯ ವಿರುದ್ಧ ಧ್ವನಿ ಮೊಳಗಿಸಿದರು. ಇದಕ್ಕೆ ಪರ್ಯಾಯವಾಗಿ ಸಂವಿಧಾನ ರಚನೆ ಮಾಡಿದರು ಎಂದರು.
ಜಾತಿ ಶ್ರೇಷ್ಟರೆಂಬ ಮೇಲ್ವರ್ಗಗಳಿಗೆ ಮಾತ್ರ ಮೀಸಲಾತಿ ಎಂಬಾತಾಗಿತ್ತು, ಅದರಲ್ಲಿಯೂ ಬ್ರಾಹ್ಮಣ ಸಮುದಾಯ ತನ್ನ ಪಾರಮ್ಯವನ್ನು ಮೆರೆಯಿತು. ಹೀಗೆ ಭೂಮಿಯ ಮೇಲಿನ ಸಂಪನ್ಮೂಲ ಮತ್ತು ಅವುಗಳ ಅನುಭೋಗ ಮೈಗಳ್ಳರ ಸ್ವತ್ತಾದವು, ಅಂದಿನ ಶಿಕ್ಷಣ ಕೇಂದ್ರಗಳಾಗಿದ್ದ ಘಟಿಕಸ್ಥಾನ ದೇವಸ್ಥಾನ, ಗುರುಕುಲು, ಮಠಗಳು, ಮನುಸ್ಮೃತಿ ಕ್ರೌರ್ಯದ ನಿಯಮಗಳ ಕಾವಲು ಕಾಯುವ ಪಡೆಗಳಾದವು, ಕಾಲಕಾಲಕ್ಕೆ ದುಡಿಯುವ ಜನರ ಕಡೆಯಿಂದ ಸಾಮೂಹಿಕ ಪ್ರತಿರೋಧವಿಲ್ಲದೆ, ಆಧುನಿಕ ಶಿಕ್ಷಣ ಪದ್ಧತಿ ಬರುವವರೆಗೂ ಇಂತಹ ಕರಾಳ ದುಸ್ಥಿತಿ ನಿರಾಳವಾಗಿ ಮುಂದವರಿದಿತ್ತು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಚಾರವಾದಿ ಕೆ.ಮಾಯಿಗೌಡ, ಪ್ರೊ.ಹುಲ್ಕೆರೆ ಮಹದೇವು, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಟಿ.ಡಿ.ಬಸವರಾಜು, ಮುಖಂಡರಾದ ಉಮೇಶ್, ಜೈಶಂಕರ್, ಅಂಕಪ್ಪ, ಗುರುಶಂಕರ್, ಎಂ.ವಿ.ಕೃಷ್ಣ, ರಮಾನಂದ ಮತ್ತಿತರರು ಉಪಸ್ಥಿತರಿದ್ದರು.