ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ವತಿಯಿಂದ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಎಚ್ಐವಿ (ಏಡ್ಸ್) ರೋಗವನ್ನು ತಡೆಗಟ್ಟುವುದರ ಬಗ್ಗೆ ಮ್ಯಾರಥಾನ್ ಓಟವು ಜರುಗಿತು.
ಮಂಡ್ಯ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಕೆ.ಮೋಹನ್ ಅವರು, ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿ, ಯುವಕರಲ್ಲಿ ಹೆಚ್ಚಾಗಿ ಈ ರೋಗವು ಕಾಣಿಸುತ್ತಿದ್ದು, ರೋಗವನ್ನು ತಡೆಗಟ್ಟುವ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲು ಈ ಮ್ಯಾರಥನ್ ಓಟವನ್ನು ಆಯೋಜಿಸಲಾಗಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಈ ಮ್ಯಾರಥನ್ ಓಟವು 18 ರಿಂದ 22 ವಯಸ್ಸಿನವರಿಗೆ ಹಮ್ಮಿಕೊಳ್ಳಲಾಗಿದ್ದು, ಏಡ್ಸ್ ನ ಬಗ್ಗೆ ಯುವಕ-ಯುವತಿಯರೆಲ್ಲರೂ ಸಹ ಎಚ್ಚರದಿಂದ ಇರಬೇಕು ಹಾಗೂ ಜಾಗರೂಕರಾಗಿರಬೇಕು ಎಂದರು.
ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಜಿ.ಓಂಪ್ರಕಾಶ್ ಮಾತನಾಡಿ, ಈ ಮ್ಯಾರಥಾನ್ ಓಟವನ್ನು ಒಟ್ಟು 50 ಮಂದಿ ಬಾಲಕಿಯರಿಗಾಗಿ ಹಾಗೂ 50 ಮಂದಿ ಬಾಲಕರಿಗಾಗಿ ಹಮ್ಮಿಕೊಂಡಿದ್ದು, ಇದರಲ್ಲಿ ಒಟ್ಟು ಆರು ಮಂದಿ ಬಾಲಕಿಯರಿಗೆ ಹಾಗೂ ಏಳು ಮಂದಿ ಬಾಲಕರಿಗೆ ನಗದು ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಮಂಡ್ಯದ ಸರ್.ಎಂ.ವಿ ಕ್ರೀಡಾಂಗಣದಿಂದ ಹೊರಟ ಈ ಮ್ಯಾರಥಾನ್ ಓಟವು, ಸುಭಾಷ್ ನಗರದ ಮೊದಲನೆಯ ರಸ್ತೆಯಿಂದ ವಿನೋಬಾ ರಸ್ತೆ ತಲುಪಿ, ಅಲ್ಲಿಂದ 100 ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತದ ಮೂಲಕ ಕಲಾಮಂದಿರದ ರಸ್ತೆಯಿಂದ ಸರ್.ಎಂ.ವಿ ಕ್ರಿಡಾಂಗಣವನ್ನು ತಲುಪಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್ ಅಧಿಕಾರಿ ಡಾ. ಸೋಮಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉಮೇಶ್, ಕಾರ್ಯಕ್ರಮದ ಮೇಲ್ವಿಚಾರಕ ವಿನಾಯಕ ಹಾಗೂ ನಿವೃತ್ತ ವೈದ್ಯರಾದ ನಿಂಗಯ್ಯ ಇನ್ನಿತರರು ಹಾಜರಿದ್ದರು.